‘ಕುಂಕುಮ, ವಿಭೂತಿ, ಕಿವಿಯೋಲೆ, ಕೈ, ಕುತ್ತಿಗೆಗಳಿಗೆ ದಾರ.. ಇತ್ಯಾದಿಗಳನ್ನು ಕರ್ತವ್ಯನಿರತ ಪೊಲೀಸರು ಧರಿಸುವಂತಿಲ್ಲ’. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ಪೊಲೀಸ್ ಆಯುಕ್ತರ ಸೂಚನೆ ಇಲಾಖೆಗೆ ಹೊಸದೇನಲ್ಲ.
ಇದು ಪೊಲೀಸ್ ನಿಯಮಾವಳಿ ಕೈಪಿಡಿಯಲ್ಲಿರುವಂಥದ್ದೇ ಆಗಿದ್ದು, ನೇಮಕಾತಿ ಹಂತದಲ್ಲಿಯೇ ಇಂಥ ನಿಯಮಗಳಿಗೆ ಬದ್ಧರಾಗಿರುವುದಕ್ಕೆ ಒಪ್ಪಿಗೆಯನ್ನು ಪಡೆಯಲಾಗಿರುತ್ತದೆ.
ಜಾತ್ಯತೀತ ವ್ಯವಸ್ಥೆಯನ್ನು ದೇಶ ಸಂವಿಧಾನಬದ್ಧವಾಗಿ ಅಂಗೀಕರಿಸಿದ್ದರೂ ಎಣಿಕೆಗೆ ಸಿಗಲಾರದಷ್ಟು ಜಾತಿ, ಮತಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಆಚರಣೆಗಳನ್ನು ಗೌರವಿಸಿದೆ.
ಇದರಿಂದಾಗಿ ಅನೇಕತೆಯನ್ನೊಳಗೊಂಡ ವ್ಯವಸ್ಥೆಯಲ್ಲಿಯೂ ಏಕತೆ ಸಾಧಿಸಿಕೊಳ್ಳುವುದರತ್ತ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ.
ಇದೇ ನಿಟ್ಟಿನಲ್ಲಿ ನಮ್ಮ ಸಾಮಾಜಿಕ ಬದುಕಿನ ವ್ಯವಸ್ಥೆಯ ಹಿತದೃಷ್ಟಿಯಿಂದ ಅಂಗ ಸಂಸ್ಥೆಗಳಲ್ಲಿ ಅವುಗಳದೇ ಆದ ನೀತಿ ನಿಯಮಗಳು ರೂಪಿತಗೊಂಡಿವೆ. ಇವುಗಳ ಕಾವಲುಗಾರಿಕೆಯಲ್ಲಿ ಪೊಲೀಸ್ ವ್ಯವಸ್ಥೆಯೂ ಒಂದಾಗಿದೆ.
‘ಎಲ್ಲ ಧರ್ಮ, ಜಾತಿಯ ಜನ ಸಮಸ್ಯೆ ಹೇಳಿಕೊಂಡು ಪೊಲೀಸರ ಬಳಿ ಬರುತ್ತಾರೆ. ಪೊಲೀಸರು ಒಂದು ಜಾತಿಗೆ ಸೇರಿದವರು ಎಂದು ಗೊತ್ತಾದರೆ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ.’ ಎಂಬುದು ಆಕ್ಷರಶಃ ಸತ್ಯ.
ಹೀಗಿರುವಾಗ ಇಲಾಖೆಯ ಎಲ್ಲ ನಿಯಮಗಳನ್ನು ಅರಿತ ಹಿರಿಯ ಅಧಿಕಾರಿ ಮಹಾಶಯರೊಬ್ಬರು ‘ನಿಯಮಗಳನ್ನು ಸಡಿಲಿಸಿ, ಅವರವರ ಧಾರ್ಮಿಕ ನಂಬಿಕೆಗಳನ್ನು ಆಚರಿಸಿಕೊಳ್ಳುವಂತೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿರುವುದು ಅಸಂಬದ್ಧ ಹಾಗೂ ಖಂಡನಾರ್ಹವೆಂದು ವಿಷಾದದಿಂದ ಹೇಳಬೇಕಿದೆ. ನಾವೆತ್ತ ಸಾಗುತ್ತಿದ್ದೇವೆ ಎಂಬುದರತ್ತ ನಮ್ಮನ್ನು ನಾವು ಆವಲೋಕಿಸಿಕೊಳ್ಳಬೇಕಿದೆ.
-ಬಿ. ಲಕ್ಕಣ್ಣ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.