ADVERTISEMENT

ಎತ್ತ ಸಾಗುತ್ತಿದ್ದೇವೆ?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 19:30 IST
Last Updated 16 ಏಪ್ರಿಲ್ 2017, 19:30 IST

ಸುಪ್ರೀಂ ಕೋರ್ಟ್‌  ಆದೇಶದಂತೆ,  ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಭಾರತೀಯ ಸಂವಿಧಾನ ಕುರಿತ 100 ಅಂಕಗಳ ಪಠ್ಯವನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಪದವಿ ಹಂತ ತಲುಪಿದ ವಿದ್ಯಾರ್ಥಿಗಳಿಗೆ ಸಂವಿಧಾನದ ಒಂದು ಸರಳ ಪರಿಚಯವಾಗುತ್ತದೆ. ಆದರೆ ಪದವಿ ಹಂತ ತಲುಪದ ಹತ್ತಾರು ಸಾವಿರ ಮಂದಿ ಇಂದು ಭಾರತದಲ್ಲಿ ಚುನಾಯಿತ ಪ್ರತಿನಿಧಿಗಳಾಗಿದ್ದಾರೆ.

ಅವರಿಗೆ ಸಂವಿಧಾನದ ಬಗ್ಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ. ಅಲಹಾಬಾದ್‌ ಮಹಾನಗರ ಪಾಲಿಕೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯರು ವಂದೇಮಾತರಂ ಹಾಗೂ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಸಭಾಂಗಣದಿಂದ ಹೊರ ನಡೆದಿದ್ದಾರೆ(ಪ್ರ.ವಾ., ಏ. 8). ತಿಳಿವಳಿಕೆಯ ಕೊರತೆಯೇ ಬಹುಶಃ ಇದಕ್ಕೆ ಕಾರಣ ಇದ್ದಿರಬಹುದು.

ಸಂವಿಧಾನದಲ್ಲಿ ನಾಗರಿಕನ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುತ್ತಾ, ರಾಷ್ಟ್ರಧ್ವಜ, ರಾಷ್ಟ್ರಗೀತೆ (ಜನಗಣಮನ) ಹಾಗೂ ರಾಷ್ಟ್ರಗಾನಕ್ಕೆ (ವಂದೇಮಾತರಂ)  ಕಡ್ಡಾಯವಾಗಿ ಗೌರವ ನೀಡಲು ನಿರ್ದೇಶಿಸಲಾಗಿದೆ. ಸಂವಿಧಾನ ರಚನಾ ಸಮಿತಿಯು ಬಹುದೀರ್ಘ ಚರ್ಚೆಯ ಬಳಿಕ ರಾಷ್ಟ್ರಗೀತೆ ಹಾಗೂ ರಾಷ್ಟ್ರಗಾನ (National Song) ವಂದೇಮಾತರಂ ಇವರೆಡಕ್ಕೂ ಸಮಾನ ಪ್ರಾಶಸ್ತ್ಯ ನೀಡಿದೆ.

ADVERTISEMENT

ಮುಂದುವರೆದು ಸರ್ಕಾರಿ ಸಭೆ, ಸಮಾರಂಭಗಳ ಆದಿಯಲ್ಲಿ ವಂದೇಮಾತರಂ ಹಾಡಬೇಕೆಂದೂ ಸಭೆಯು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳ್ಳಬೇಕೆಂದೂ ನಿರ್ದೇಶಿಸಿದೆ. ಆಕಾಶವಾಣಿಯಲ್ಲಿ ಮುಂಜಾನೆಯ ಆರಂಭದ ಮೊದಲಗಾನವೇ ವಂದೇಮಾತರಂ ಗೀತೆ ಎಂಬ ತಿಳಿವಳಿಕೆಯನ್ನು ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಈಗಲಾದರೂ ನೀಡಬೇಕು.

ಶೋಚನೀಯ ಸ್ಥಿತಿ ಎಂದರೆ ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನದ ಜನಕ ಜಿನ್ನಾ, ವಂದೇಮಾತರಂ ಗೀತೆಗೆ ಅಪಚಾರಗೈದು ಆರಂಭಿಸಿದ ಕೋಮುವಾದವನ್ನು ಇಂದಿಗೂ ನಮ್ಮಲ್ಲಿರುವ ಕೆಲವರು ಮುಂದುವರೆಸುತ್ತಿದ್ದಾರೆ ಎಂಬುದನ್ನು ಗಮನಿಸಿದಾಗ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಆತಂಕ ಎದುರಾಗುತ್ತದೆ. ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.
-ಟಿ.ಎನ್‌. ಪ್ರಭಾಕರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.