‘ಗೂಢ ಉದ್ದೇಶ’ (ವಾ.ವಾ., ಏ. 19) ಓದಿದೆ. ವಸುಧೇಂದ್ರ ಹೇಳಿದಂತೆ ಇದು ಗೂಢ ಉದ್ದೇಶವೇನೂ ಅಲ್ಲ. ಸಾಹಿತ್ಯದಲ್ಲೂ ಎಡಪಂಥ ಮತ್ತು ಬಲಪಂಥ ಎಂಬ ಗುಂಪುಗಳಿರುವುದು ನಿಜ. ಅವು ತಮ್ಮ ತಮ್ಮ ತತ್ವ ಸಿದ್ಧಾಂತಗಳ ಮೂಲಕ ಸಮಾಜವನ್ನು ಮುನ್ನಡೆಸಬೇಕೆಂಬ ಉದ್ದೇಶ ಹೊಂದಿರುವುದೂ ನಿಜ. ಆದ್ದರಿಂದ ತಮ್ಮೊಂದಿಗೆ ಯಾರ್ಯಾರಿದ್ದಾರೆ ಎಂಬ ಪಟ್ಟಿ ನೀಡುವುದು ಸರಿಯೇ ಆಗಿದೆ.
ಅಂದಹಾಗೆ ಇಲ್ಲಿ ಎರಡೂ ಕಡೆ ಸಲ್ಲುವ ವೇಷಧಾರಿಗಳೂ ಇದ್ದಾರೆ; ಎಡಬಿಡಂಗಿಗಳೂ ಇದ್ದಾರೆ. ಹೀಗಾಗಿ ‘ನಮ್ಮೊಂದಿಗೆ’– ಎಂಬ ಹೆಸರಿನ ಪಟ್ಟಿ ನೀಡುವುದು ಪಾರದರ್ಶಕವೂ ಆಗಿದೆ. ಆದ್ದರಿಂದ ವಸುಧೇಂದ್ರ ಹೇಳಿದಂತೆ ಇದನ್ನು ರಾಜಕಾರಣಿಗಳ ವರಸೆಗೆ ಹೋಲಿಸಬೇಕಿಲ್ಲ. ಅಷ್ಟಕ್ಕೂ ರಾಜಕಾರಣಿಗಳ ಜನ ಸೇರಿಸುವ ವರಸೆಯೂ ತಪ್ಪಲ್ಲವಲ್ಲ.
ರಾಜಕಾರಣಿಯೋ ಸಾಹಿತಿಯೋ ಒಟ್ಟಾರೆಯಾಗಿ ತಾವು ಏನನ್ನು ಹೇಳಬಯಸುವರೋ ಅದಕ್ಕೆ ಜನರನ್ನು ಆಹ್ವಾನಿಸಿದರೆ ತಪ್ಪೇನಿದೆ? ಇದರಿಂದಾಗಿ ಸಾಹಿತ್ಯದ ಸದುದ್ದೇಶವೂ ಹಾಳಾಗುವುದಿಲ್ಲ. ಮಂಥನದಿಂದಾಗಿ ಗೊಂದಲಗಳು ನಮ್ಮಲ್ಲಿ ನಿವಾರಣೆಯಾಗಿ ಅರ್ಥಸ್ಪಷ್ಟತೆ ಉಂಟಾಗಿ ಮತ್ತೆ ಸಾಹಿತ್ಯ ಸೃಷ್ಟಿಗೆ ವೇಗ ಲಭಿಸುತ್ತದೆಯಲ್ಲವೇ?
–ಹುರುಕಡ್ಲಿ ಶಿವಕುಮಾರ
ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.