ADVERTISEMENT

ನಿಯಮಗಳನ್ನು ಕಲಬುರ್ಗಿ ಗಮನಿಸಲಿ

ಪ್ರಜಾವಾಣಿ ವಿಶೇಷ
Published 28 ಮೇ 2014, 19:30 IST
Last Updated 28 ಮೇ 2014, 19:30 IST

ರಾಜ್ಯ ಸರ್ಕಾರ ಕೊಡಮಾಡಿದ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿಗೆ (೨೦೧೨) ಸಂಬಂಧ­ಪಟ್ಟಂತೆ  (ವಾ.ವಾ, ಮೇ 27) ಪ್ರಕಟವಾದ ಪ್ರೊ. ಎಂ.ಎಂ. ಕಲಬುರ್ಗಿ­­­ಯವರ ಮಾತುಗಳು ದಿಕ್ಕು­ತಪ್ಪಿಸು­ವಂಥವು. ಬರೆ­ಯುವ ಮುನ್ನ ಬಸವ ಪುರಸ್ಕಾರದ ನೀತಿ, ನಿಯಮಗಳನ್ನು ಕಲಬುರ್ಗಿ­ಯವರು ಒಂದು ಬಾರಿ ಗಮನಿಸುವ ಜವಾ­ಬ್ದಾರಿ­ ತೋರಬೇಕಾಗಿತ್ತು.

ಬಸವ ಪುರಸ್ಕಾರಕ್ಕೆ ಸಂಬಂಧಿಸಿದ ನಿಯಮಗಳು ಹೀಗಿವೆ: ಈ ಪ್ರಶಸ್ತಿ ರಾಷ್ಟ್ರಮಟ್ಟದ್ದಾಗಿದ್ದು ಸರ್ವ­ಧರ್ಮ ಸಮಾನತೆ­ಗಾಗಿ ತನು ಮನ­ಗಳನ್ನು ಅರ್ಪಿ­ಸಿ­ಕೊಂಡ ವಿಶಿಷ್ಟ ವ್ಯಕ್ತಿಗಳಿಗೆ, ಅವರ ಕೊಡುಗೆ­ಯನ್ನು ಪರಿ­­­ಗಣಿಸಿ ಪ್ರತಿವರ್ಷ ನೀಡಲಾಗುತ್ತದೆ. ಈ ಪ್ರಶ­ಸ್ತಿಗೆ  ಯಾವುದೇ ರಾಜ್ಯದ ಸರ್ವಧರ್ಮ ಸಮಾ­ನತೆ­­ಗಾಗಿ ಸೇವೆ ಸಲ್ಲಿಸಿದ ವಿಶಿಷ್ಟ ವ್ಯಕ್ತಿಗಳು ಅರ್ಹ­ರಾಗಿ­ರುತ್ತಾರೆ. ಸಲಹಾ ಸಮಿತಿ ತನ್ನ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸು­ತ್ತದೆ. ಈ ಶಿಫಾರಸು­ಗಳು ಸರ್ಕಾ­ರದ ಪರಿ­ಶೀ­ಲನೆ, ಮಾರ್ಪಾಡು, ಅಂತಿಮ ನಿರ್ಣಯಕ್ಕೆಒಳ­ಪಟ್ಟಿರುತ್ತವೆ.

ಯು.ಆರ್. ಅನಂತಮೂರ್ತಿಯವರು ಜಾತಿವಾದ, ಕೋಮು­ವಾದ ಹಾಗೂ ಪುರೋಹಿತಶಾಹಿ ವಿರುದ್ಧ ನಿರಂ­ತರ ಹೋರಾಟ ಮಾಡುತ್ತ ಬಂದಿರುವವರು.  ಶೋಷಿತ, ಅಸ್ಪೃಶ್ಯ ಹಾಗೂ ತಳಸಮು­ದಾಯ­ಗಳ ಪರ ಹೋರಾ­ಟ­­­­ಗ­ಳಲ್ಲಿ ಎಂದಿಗೂ ಮುಂಚೂಣಿಯಲ್ಲಿ ಇರುವ ಇವರು ಬಸವಣ್ಣನವರು ಎತ್ತಿ­ಹಿಡಿದ ಸಮ­ಸಮಾ­ಜದ ತತ್ತ್ವ­­ವನ್ನು ನಮ್ಮ ಕಾಲದಲ್ಲಿ ಕ್ರಿಯಾತ್ಮಕ­ವಾಗಿ ಪ್ರತಿ­ಪಾ­ದಿಸುತ್ತಿ­ರುವವರು. ಸಮಾಜ­­ವಾದಿ ಧೋರಣೆ­ಗಳನ್ನು ಕನ್ನಡ ಸಮುದಾಯದಲ್ಲಿ ಬೆಳೆಸುತ್ತಿ­ರುವ ಕನ್ನಡದ ಹಿರಿಯರಲ್ಲಿ ಇವರು ಪ್ರಮುಖರು.  ತಮ್ಮ ಚಿಂತನೆ ಮತ್ತು ಸೃಜನಶೀಲ ಕೃತಿಗಳಲ್ಲಿ ಇಂಥ ತಾತ್ತ್ವಿಕ ಆಯಾ­ಮ­­­ಗ­ಳನ್ನು ಪ್ರಖರವಾಗಿ ಮೂಡಿಸಿದ­ವರು. ಅವರ ‘ಸಂಸ್ಕಾರ’, ‘ಭಾರತೀ­ಪುರ’ ಕೃತಿಗಳನ್ನು ಓದಿದವರಿಗೆ ಹೆಚ್ಚು ವಿವರಿಸಬೇಕಾದ ಅಗತ್ಯವಿಲ್ಲ.

ವಚನ ಚಳವಳಿಯು ಎತ್ತಿಹಿಡಿದ ಕನ್ನಡ ಭಾಷೆಯ ಬಳಕೆಯ ಪ್ರಾಮುಖ್ಯವನ್ನು ನಮ್ಮ ಕಾಲದಲ್ಲಿ ಮೊದಲಿ­­ನಿಂ­­ದಲೂ ಅನಂತಮೂರ್ತಿ ಒತ್ತಿ ಹೇಳಿದ­ವರು.  ಶಿಕ್ಷಣ­ದಲ್ಲಿ ಸಮಾ­ನತೆ­, ಕನ್ನಡ ಪರವಾದ ಧ್ವನಿ, ತಾತ್ವಿಕ ಚಿಂತನೆ­ಯನ್ನೂ ಎತ್ತುತ್ತಿರುವ ಅನಂತ­ಮೂರ್ತಿ, ಪ್ರಜಾ­­ಸತ್ತಾತ್ಮಕ ಆಯಾಮ­­ಗಳನ್ನು ದೃಢ­­ಗೊಳಿ­­ಸಲು ಕ್ರಿಯಾ­ಶೀಲ­ವಾಗಿರುವ­­­ವ­ರಲ್ಲಿ ಪ್ರಮುಖರು.

ಬಸವ ಪುರಸ್ಕಾರವನ್ನು ಪಡೆದವರ ಸಾಲಿನಲ್ಲಿ ಪ್ರಮುಖ­­ರಾದ  ಎ.ಪಿ.ಜೆ. ಅಬ್ದುಲ್ ಕಲಾಂ, ಸರ­ಸ್ವತಿ ಗೋರಾ, ಡಾ. ಎಚ್. ನರಸಿಂಹಯ್ಯ ಮುಂತಾ­ದ­ವರು ವಚನಗಳ ಬಗ್ಗೆ ಸಂಶೋಧನೆ, ಸಂಪಾ­­ದನೆ ಮಾಡಿದವ­ರೇನಲ್ಲ. ವಚನ ಚಳವಳಿಯ ಕೆಲವು ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಹೊಂದಿ­ದವ­ರಾಗಿದ್ದರು ಎನ್ನುವ ಕಾರಣ­ಕ್ಕಾಗಿಯೇ ಇವರಿಗೆ ಪ್ರಶಸ್ತಿ ಬಂದಿದೆ ಎಂದು ನಾವು ನಂಬಿದ್ದೇವೆ.  ಬೂಕರ್ ಪ್ರಶಸ್ತಿಗೆ ನಾಮಾಂ­ಕಿತ­ರಾಗಿದ್ದ ಅನಂತ­ಮೂರ್ತಿ­ಯವರು ತಮ್ಮ ಮೇಲೆ ಪ್ರಭಾವ ಬೀರಿದ್ದ ವ್ಯಕ್ತಿತ್ವ­ಗಳಲ್ಲಿ ಬಸವಣ್ಣನವರ ಹೆಸ­ರನ್ನು ಒಂದು ಸಂದ­ರ್ಶನದಲ್ಲಿ ಪ್ರಧಾನವಾಗಿ ಹೆಸ­ರಿಸಿ­­ದ್ದು­ದನ್ನೂ ಗಮ­ನಿಸ­ಬೇಕು. 

೨೦೦೩ರಲ್ಲಿ ಪ್ರಕಟ­­ವಾದ ಜಗದ್ಗುರು  ಶಿವರಾತ್ರೀಶ್ವರ ಗ್ರಂಥ­ಮಾಲೆಯ ವೀರ­ಶೈವ­ಧರ್ಮದರ್ಶನದ ಸಂಪುಟಗಳಿಗೆ  ಅನಂತಮೂರ್ತಿ­ಪ್ರಧಾನ ಸಂಪಾ­ದಕ­ರಾಗಿದ್ದರು.  ಈಗಲೂ ಪ್ರಮುಖ ಪರಾ­ಮ­ರ್ಶನ ಗ್ರಂಥಗಳಾಗಿರುವ ಇವುಗಳ ಮೌಲ್ಯ­ವನ್ನು ಓದುಗರು ಗಮನಿಸಬೇಕು. ಬಸವ ಪುರಸ್ಕಾರ ನೀಡಿ­ರುವ ಆಯ್ಕೆ ಸಮಿತಿಯ ತೀರ್ಮಾನವು ನಿಯಮಕ್ಕೆ ಎಂದೂ ವಿರೋಧ­ವಾಗಿಲ್ಲ ಮತ್ತು ಪಕ್ಷಪಾತದಿಂದ ನಡೆದು­­ಕೊಂಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ.

ಡಾ. ಕಲಬುರ್ಗಿ ತಮ್ಮ ಪತ್ರದಲ್ಲಿ ಸಮಿತಿ ಸದಸ್ಯ­ರು, ಅಧಿಕಾರಿಗಳು, ಸಚಿವರು ಹಾಗೂ ಸಭಿಕರನ್ನು ದೂಷಿಸಿದ್ದಾರೆ. ಅವರ ದೃಷ್ಟಿಯಲ್ಲಿ ಇವರೆಲ್ಲರೂ ಬೇಜವಾಬ್ದಾರಿ ಮತ್ತು  ಹಗರಣ ಮಾಡುವ ಜನರೆ?
ರಂಜಾನ್ ದರ್ಗಾ, ಬಸವರಾಜ ಕಲ್ಗುಡಿ,   ಮಲ್ಲೇಪುರಂ ವೆಂಕಟೇಶ್, ಗುರುಲಿಂಗ ಕಾಪಸೆ
(ಬಸವ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.