ADVERTISEMENT

ಸರಿಪಡಿಸುತ್ತೇವೆ

ಕಡಿದಾಳ್ ಪ್ರಕಾಶ್, ಸಮ ಕಾರ್ಯದರ್ಶಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ
Published 29 ನವೆಂಬರ್ 2015, 19:47 IST
Last Updated 29 ನವೆಂಬರ್ 2015, 19:47 IST

ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ಪ್ರಕಟಿಸಿರುವ ‘ಕುವೆಂಪು ಸಮಗ್ರ ಸಾಹಿತ್ಯಮಾಲೆ’ಯ ‘ಶ್ರೀ ರಾಮಾಯಣ ದರ್ಶನಂ’ ಸಂಪುಟದಲ್ಲಿ, ‘ಶ್ರೀ ವೆಂಕಣ್ಣಯ್ಯನವರಿಗೆ’ ಅರ್ಪಣೆಯ ಭಾಗ ಬಿಟ್ಟು ಹೋಗಿರುವುದನ್ನು ಡಾ. ಶ್ರೀಪಾದ ಭಟ್ ಅವರು ಮಾಧ್ಯಮದ ಗಮನಕ್ಕೆ ತಂದು (ವಾ.ವಾ., ನ. 26) ‘ಕವಿವರ್ಯರಿಗೂ ಅವರ ಗುರುಭಕ್ತಿಗೂ ದರ್ಶನದ ಉದ್ದೇಶಕ್ಕೂ ಮಾಡಿದ ಅಪಚಾರವಲ್ಲವೆ?’ ಎಂದು ಪ್ರಶ್ನಿಸಿದ್ದಾರೆ.

ಭಟ್ ಅವರು ಹೇಳಿರುವಂತೆ ಅರ್ಪಣೆಯ ಭಾಗ ಬಿಟ್ಟು ಹೋಗಿರುವುದು ಸತ್ಯ. ಆದರೆ ಇದು ಉದ್ದೇಶಪೂರ್ವಕವಾದ ಕೃತ್ಯವಲ್ಲ. ಸುಮಾರು ಹನ್ನೊಂದು ಸಾವಿರ ಪುಟಗಳಷ್ಟು ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸುವಾಗ ಉಂಟಾದ ಕಣ್ತಪ್ಪು. ಈ ಹಿಂದೆಯೇ ಇದನ್ನು ಗಮನಿಸಿದ ಪ್ರತಿಷ್ಠಾನವು ಈಗಾಗಲೇ ಆ ಎರಡು ಪುಟಗಳನ್ನು ಮುದ್ರಿಸಿ, ಸಂಪುಟದ ಜೊತೆಗೆ ನೀಡುತ್ತಿದೆ.

ಮುಂದಿನ ಮುದ್ರಣದಲ್ಲಿ ತಪ್ಪನ್ನು ಸರಿಪಡಿಸಿಕೊಳ್ಳುವ ನಿರ್ಧಾರ ಮಾಡಲಾಗಿದೆ. ಅಲ್ಲದೆ ಪ್ರತಿಷ್ಠಾನದ ವೆಬ್‌ಸೈಟ್‌ನಲ್ಲಿ ‘ಶ್ರೀ ರಾಮಾಯಣ ದರ್ಶನಂ’ ಬಗ್ಗೆ ನೀಡಿರುವ ಟಿಪ್ಪಣಿಯ ಜೊತೆ ಮುದ್ರಣದಲ್ಲಿ ಬಿಟ್ಟುಹೋಗಿರುವ ಎರಡು ಪುಟಗಳನ್ನು ನೀಡಿ, ಆಸಕ್ತರು ಅದನ್ನು ಓದುವುದಕ್ಕೂ ಅಗತ್ಯವಿದ್ದಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಿದೆ (www.kuvemputrustkuppali.com). ಯಾವುದೇ ಅನೌಚಿತ್ಯವನ್ನು ಕಂಡಾಗಲೀ ಗುರುಭಕ್ತಿಗೆ ಅಪಚಾರ ಮಾಡಲಾಗಲೀ ಅಲ್ಲ ಎಂಬುದನ್ನು ಶ್ರೀಯುತರು ಗಮನಿಸಬೇಕಾಗಿ ವಿನಂತಿ.

ಕುಪ್ಪಳಿಯ ಕವಿಮನೆಯಲ್ಲಿ ಕಳ್ಳತನದಂತಹ ಕಹಿಘಟನೆಗೆ ಕನ್ನಡಿಗರು ವಿಷಾದಿಸಿ ಸಮಾಧಾನದ ಮಾತುಗಳನ್ನು ಆಡುತ್ತಿರುವ ಈ ಸಂದರ್ಭದಲ್ಲಿಯೇ ಡಾ.ಭಟ್ ಈ ಸುದ್ದಿಯನ್ನು ಮಹಾ ಅಪರಾಧವೆಂಬಂತೆ ಬಿಂಬಿಸುತ್ತಿರುವುದು ನಮಗೆ ಆಶ್ಚರ್ಯವನ್ನು ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.