ADVERTISEMENT

‘ಟಿಇಟಿ’ಗೆ ಸ್ವಾಗತ ! ಆದರೆ...

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ‘ಶಿಕ್ಷ­ಕರ ಅರ್ಹತಾ ಪರೀಕ್ಷೆ’ (ಟಿಇಟಿ)ನಡೆಸಿ ಶಿಕ್ಷಕ­ರನ್ನು ನೇಮಿಸಿಕೊಳ್ಳಲು ನಿರ್ಧರಿಸಿರುವುದು ಅತ್ಯಂತ ಸಮಂಜಸವಾದ ನಿರ್ಧಾರ. ಶಿಕ್ಷಕ­ರಾ­ಗು­ವುದು ಎಂದರೆ ಅನಾಯಾಸವಾಗಿ ಸಂಬಳ ಸಿಗುವ ಒಂದು ಕೆಲಸ ಎಂಬ ಮನೋ­­ಭಾವ ಇದರಿಂದ ಸ್ವಲ್ಪವಾದರೂ ಕಡಿಮೆ­ಯಾದೀತು.  ಈ ಪರೀಕ್ಷೆ­ಗಳು ಮಾತ್ರ ತುಂಬಾ ಕಟ್ಟುನಿಟ್ಟಾಗಿಯೂ, ಪ್ರಾಮಾ­ಣಿಕ­ವಾಗಿಯೂ ನಡೆಯ­ಬೇಕಾ­ಗುತ್ತದೆ.

ಈ ‘ಟಿಇಟಿ’ ಪರೀಕ್ಷೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರಿಗೂ ಕಡ್ಡಾಯ­ವಾದರೆ ಇನ್ನಷ್ಟು ಉತ್ತಮ.  ಕನಿಷ್ಠ ಐದು ವರ್ಷ­ಕ್ಕೊಮ್ಮೆ ಎಲ್ಲ ಶಿಕ್ಷಕರೂ ಈ ಪರೀಕ್ಷೆಯನ್ನು ಬರೆದು ನಿಗದಿ ಪಡಿಸಿದ ಅಂಕಗಳನ್ನು ಪಡೆಯು­ವುದು ಕಡ್ಡಾಯವಾಗ­ಬೇಕು.
ಗುರಿ ಸಾಧಿಸದ ಶಿಕ್ಷಕರ ಮುಂಬಡ್ತಿಯನ್ನು ತಡೆಹಿಡಿಯುವಂತಹ ನಿಯಮಗಳೂ ಜಾರಿಯಾಗಬೇಕು.

ಒಮ್ಮೆ ಶಿಕ್ಷಕರಾಗಿ ನೇಮಕವಾದ ನಂತರ ಯಾವ ಜ್ಞಾನವನ್ನೂ ಹೆಚ್ಚಿಸಿಕೊಳ್ಳದೆ, ಮಕ್ಕಳ ಮನಸ್ಸನ್ನು ಅರಿಯಲು ಯತ್ನಿಸದೆ, ಕಲಿಸುವ ವಿಧಾನಗಳಲ್ಲಿ ಉಂಟಾಗುತ್ತಿರುವ ಹೊಸ ಪ್ರಯೋಗ­ಗಳ ಅರಿವೇ ಇಲ್ಲದ ಬಹುಪಾಲು ಶಿಕ್ಷಕರು ಇದರಿಂದ ಕಲಿಸುವ ವಿಧಾನಗಳನ್ನು ಬದಲಿಸಿಕೊಳ್ಳುವ, ಕಲಿಸುವ ಬದ್ಧತೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳನ್ನಂತೂ ಮಾಡು­ತ್ತಾರೆ. ಇದರ ಲಾಭವಂತೂ ಮುಂದಿನ ಜನಾಂಗಕ್ಕೆ ಸಿಗುತ್ತದೆ.

ಪ್ರಾಥಮಿಕದಿಂದ ಪ್ರೌಢಶಾಲೆಗೆ.. ಅಲ್ಲಿಂದ ಮುಂದೆ ಕಾಲೇಜುಗಳಿಗೆ ಬಡ್ತಿ ಹೊಂದುವ ಏಕಮಾತ್ರ ಉದ್ದೇಶದಿಂದ ಇಂದು ಪದವಿ, ಬಿಎಡ್ ಸರ್ಟಿಫಿಕೆಟ್ ಪಡೆಯಲು ಶಿಕ್ಷಕರಲ್ಲಿ ನೂಕುನುಗ್ಗಲು ಹೆಚ್ಚಿರುವುದು ನಿಜ. ಇಂತಹ ಪರಿಸ್ಥಿತಿಯನ್ನು ಬಳಸಿಕೊಂಡು ಕಡ್ಲೆಪುರಿಯಂತೆ ಪದವಿಗಳನ್ನು ನೀಡುತ್ತಿರುವ ಮಧ್ಯವರ್ತಿ ಸಂಸ್ಥೆಗಳು, ವ್ಯಕ್ತಿಗಳು ಎಲ್ಲ ಕಡೆ ಹೆಚ್ಚಿರುವುದೂ ನಿಜ.

ಈ ದಂಧೆಗೆ ಕಡಿವಾಣ ಹಾಕಬೇಕೆಂದರೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರನ್ನೂ ಇಂತಹದೊಂದು ಪರೀಕ್ಷೆಗೆ ಒಳಪಡಿಸಲೇಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.