ADVERTISEMENT

ಅಂಧಾಭಿಮಾನ ಸಲ್ಲ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST

‘ಪದ್ಮಾವತ್’ ಸಿನಿಮಾಕ್ಕೆ ಎದುರಾಗಿರುವ ವಿರೋಧವನ್ನು ಆಧಾರವಾಗಿಟ್ಟು ರಾಮಚಂದ್ರ ಗುಹಾ ಅವರು ‘ಹಿಂದೆಂದಿಗಿಂತಲೂ ಈಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಹೆಚ್ಚಾಗಿ ನಡೆಯುತ್ತಿದೆ’ ಎಂದು ಹೇಳುತ್ತಾರೆ ಮತ್ತು ‘ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಬಗ್ಗೆ ಯಾವ ಪಕ್ಷದ ರಾಜಕಾರಣಿಯೂ ಇದುವರೆಗೂ ಮಾತನಾಡಿಲ್ಲ’ ಎಂದು ಬೇಸರಿಸಿದ್ದಾರೆ.

ಒಂದೆರಡು ಘಟನೆಗಳನ್ನಾಧರಿಸಿ ಭಾರತದಂಥ ಬೃಹತ್ ದೇಶದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆಧಕ್ಕೆಯೊದಗಿದೆ’ ಎಂದು ಹಳಹಳಿಸುವುದು ಎಷ್ಟು ಸಮರ್ಥನೀಯ?

ಸಭೆ– ಸಮಾರಂಭಗಳಲ್ಲಿ ರಾಜಕಾರಣಿಗಳು, ಸಾಹಿತಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸಲು ಎಲ್ಲಿದೆ ಅಡ್ಡಿ? ನಾಲ್ಕಾರು ಪ್ರಮುಖ ವ್ಯಕ್ತಿಗಳ ಹತ್ಯೆಯಾಯಿತು (ದಾಭೋಲ್ಕರ್, ಕಲಬುರ್ಗಿ, ಗೌರಿ ಲಂಕೇಶ್ ಮುಂತಾದವರು). ಇದರಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿದೆ ಎಂದು ತಿಳಿವಳಿಕೆ ಇರುವವರೇ ಹಲುಬಿದರೆ ಹೇಗೆ? ನಮ್ಮ ರಾಜ್ಯದಲ್ಲಿ ವಿವಿಧ ಪಕ್ಷಗಳ ರಾಜಕೀಯ ಪ್ರಮುಖರು ಪರಸ್ಪರರನ್ನು ಹಂಗಿಸಿ ಹಳಿಯುವುದನ್ನು ನೋಡಿದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎಷ್ಟು ಮುಕ್ತವಾಗಿ ವಿರಾಜಿಸುತ್ತಿದೆ ಎನ್ನುವುದು ವೇದ್ಯವಾದೀತು! ನಿಜದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿಲ್ಲ, ಅದರ ದುರ್ಬಳಕೆಯ ರೆಕ್ಕೆಗಳನ್ನು ಕತ್ತರಿಸುವುದು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ!

ADVERTISEMENT

‘ಭಾರತದ ಬಹುತ್ವವನ್ನು ಕಾಪಾಡಿಕೊಳ್ಳಲು ಸಾಂವಿಧಾನಿಕ ಮೌಲ್ಯಗಳಿಗೆ ಮರಳಬೇಕು. ವೇದ, ಬೈಬಲ್ ಅಥವಾ ಕುರಾನ್‌ಗಳಿಗಲ್ಲ’ ಎನ್ನುತ್ತಾರೆ ಗುಹಾ. ಹಾಗಾದರೆ ಈ ಧರ್ಮಗ್ರಂಥಗಳನ್ನು ಸಂವಿಧಾನ ತಿರಸ್ಕರಿಸಿದೆಯೇ? ದೋಷ ಇರುವುದು ಧರ್ಮಗ್ರಂಥಗಳಲ್ಲಿ ಅಲ್ಲ. ಅವು ಪ್ರತಿಪಾದಿಸುವ ಜೀವನ ಮೌಲ್ಯಗಳನ್ನು ಪರಿಪಾಲಿಸದೆ ಇರುವುದರಲ್ಲಿ.

ಇತಿಹಾಸಕಾರ ತಾನು ಪರಿಭಾವಿಸಿದಂತೆ ಘಟನೆಗಳನ್ನು ವ್ಯಾಖ್ಯಾನಿಸುತ್ತಾನೆ. ವ್ಯಕ್ತಿನಿಷ್ಠತೆಇಂಥಲ್ಲಿ ಅನಿವಾರ್ಯ. ಆದರೆ ಅಂಧಾಭಿಮಾನ ಇತಿಹಾಸ ರಚನೆಗೆ ಮಾರಕ.

-ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.