ಬೆಂಗಳೂರು: ‘ಹೌದ್ರಿ, ಬಡವರ ಕೆಲಸ ಯಾವಾಗಲೂ ತರಾತುರಿಯಲ್ಲೇ ಮಾಡಬೇಕು, ಬಡವರ ಕೆಲಸ ನಿದ್ದೆ ಮಾಡುತ್ತಾ ಮಾಡಲಾಗುತ್ತದೆಯೇ? ಹಸಿವು ನೀಗಿಸುವ ಕೆಲಸ ತರಾತುರಿಯಲ್ಲೇ ಮಾಡಿ ಮುಗಿಸಬೇಕು...’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಬಗ್ಗೆ ಮಾಧ್ಯಮದವರಿಂದ ಎದುರಾದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
‘ರಾಜ್ಯ ಸರ್ಕಾರ ಸರಿಯಾದ ಸಿದ್ಧತೆ ಇಲ್ಲದೆ, ಚುನಾವಣೆ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ಗಳನ್ನು ತರಾತುರಿಯಲ್ಲಿ ಆರಂಭಿಸುತ್ತಿದೆ’ ಎಂದು ವಿರೋಧ ಪಕ್ಷಗಳ ಮುಖಂಡರು ಮಾಡಿರುವ ಟೀಕೆಗಳಿಗೆ ಅವರು ಈ ರೀತಿ ತಿರುಗೇಟು ನೀಡಿದ್ದರು. ಭಾಗವಹಿಸುವ ಕಾರ್ಯಕ್ರಮಗಳಲ್ಲೆಲ್ಲ ಮುಖ್ಯಮಂತ್ರಿ ಈ ಮಾತುಗಳನ್ನೇ ಅಸ್ತ್ರವಾಗಿ ಬಳಸುತ್ತಿದ್ದಾರೆ.
ಟೀಕಾಸ್ತ್ರವಾಗಿ ಪ್ರಯೋಗವಾದ ‘ತರಾತುರಿ’ ಪದಕ್ಕೆ ‘ಬಡವರ ಕೆಲಸ ತರಾತುರಿಯಲ್ಲೇ ಆಗಬೇಕು’ ಎಂದು ಸಿದ್ಧರಾಮಯ್ಯ ನೀಡಿದ ಉತ್ತರವನ್ನು ಈಗ ಅಧಿಕಾರಿಗಳು ಹಾಗೂ ಇತರ ಜನಪ್ರತಿನಿಧಿಗಳೂ ನೀಡಲು ಆರಂಭಿಸಿದ್ದಾರೆ.
‘ಒಂದೇ ಒಂದು ಅಡುಗೆ ಮನೆ ಪೂರ್ಣಗೊಳಿಸಿ, 101 ಇಂದಿರಾ ಕ್ಯಾಂಟೀನ್ ಆರಂಭಿಸಿರುವುದು ತರಾತುರಿಯಲ್ಲವೇ’ ಎಂದು ಮಾಧ್ಯಮ ಪ್ರತಿನಿಧಿಗಳು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಆಡಳಿತವನ್ನು ಪ್ರಶ್ನಿಸಿದಾಗ, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮತ್ತು ಮೇಯರ್ ಜಿ.ಪದ್ಮಾವತಿ ಅವರಿಂದಲೂ ‘ಬಡವರ ಕೆಲಸ ಯಾವಾಗಲೂ ತರಾತುರಿಯಲ್ಲೇ ಆಗಬೇಕು’ ಎನ್ನುವ ಉತ್ತರ ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.