ಬಳ್ಳಾರಿ: ‘ನನಗೆ ಗೊತ್ತಿದೆ. ಗಣಿಗಾರಿಕೆಯಿಂದ ಪ್ರಸಿದ್ಧವಾದ ಜಿಲ್ಲೆಯಲ್ಲಿ ಸಾಕಷ್ಟು ಹಣವಿದೆ. ಅದನ್ನು ಇಲ್ಲಿ ಹಾಕಿ ಎಂದು ಹಾರುಬೂದಿಯ ಜಾಗ ತೋರಿಸುತ್ತಿದ್ದೇವೆ’.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ್ ವ್ಯಂಗ್ಯಮಿಶ್ರಿತ ದನಿಯಲ್ಲಿ ಹೀಗೆ ಮನವಿ ಮಾಡಿದಾಗ ಉದ್ಯಮಿಗಳ ಸಭೆಯಲ್ಲಿ ಕೆಲ ಕ್ಷಣ ನಗೆಯ ಅಲೆ ಎದ್ದಿತು.
ಶಾಖೋತ್ಪನ್ನ ವಿದ್ಯುತ್ ಘಟಕಗಳ ತ್ಯಾಜ್ಯವಾದ ಹಾರುಬೂದಿಯ ಉಪಯೋಗ ಮತ್ತು ಆಧುನಿಕ ತಂತ್ರಜ್ಞಾನ ವಿಧಾನ ಕುರಿತು ನಗರದಲ್ಲಿ ಗುರುವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಕುಮಾರ ನಾಯಕ್, ‘ಹಾರುಬೂದಿಯಿಂದ ಉತ್ಪಾದಿಸಲಾಗುವ ಕಟ್ಟಡ ಸಾಮಗ್ರಿಗಳ ಬಾಳಿಕೆ ಅವಧಿ ಹೆಚ್ಚು. ಹೀಗಾಗಿ ಉದ್ಯಮಿಗಳು ಗಮನ ಹರಿಸಬೇಕು. ನನ್ನ ಮಾತುಗಳನ್ನು ಕುರುಡಾಗಿ ಪಾಲನೆ ಮಾಡಬೇಕಾಗಿಲ್ಲ’ ಎಂದೂ ಸ್ಪಷ್ಟಪಡಿಸಿದರು.
ವಂದನಾರ್ಪಣೆ ವೇಳೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾವತಿ, ವಸತಿ ಯೋಜನೆಗೆ ಹಾರುಬೂದಿ ಇಟ್ಟಿಗೆಗಳನ್ನು ಬಳಸುವ ಕುರಿತು ಸರ್ಕಾರ ಚಿಂತಿಸುತ್ತಿರುವುದೇನೋ ಸರಿ. ಆದರೆ ಹಾರುಬೂದಿಯ ಉತ್ಪನ್ನಗಳನ್ನು ಬಳಸುವಂತೆ ಗುತ್ತಿಗೆದಾರರಿಗೆ ಸರ್ಕಾರ ಏಕೆ ಆದೇಶಿಸಬಾರದು ಎಂದು ಪ್ರಶ್ನಿಸಿ, ಕುಮಾರ ನಾಯಕ್ ಅವರನ್ನೂ ಅಚ್ಚರಿಗೆ ತಳ್ಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.