ರಾಜ್ಯದ 17 ಜಿಲ್ಲೆಗಳಲ್ಲಿರುವ 471 ಗ್ರಾಮಗಳ 3.76 ಲಕ್ಷ ಜನರಿಗೆ ನಿತ್ಯ 1,419 ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಇದು ಅಧಿಕಾರಿಗಳ ಲೆಕ್ಕ. ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿಯೂ ನೀರಿನ ಸಮಸ್ಯೆ ತಲೆದೋರಿದೆ. ಬರಪೀಡಿತ ಎಂದು ಘೋಷಿಸಿರುವ 125 ತಾಲ್ಲೂಕುಗಳಲ್ಲಿಯೂ ನೀರಿನ ಅಭಾವ ಗಂಭೀರ ಸ್ವರೂಪ ಪಡೆದಿದೆ. ಅಗತ್ಯ ಇರುವ ಕಡೆ ಕೊಳವೆ ಬಾವಿಗಳನ್ನು ಕೊರೆಯಬೇಕು. ಅನಿವಾರ್ಯವಾದರೆ ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದ್ದರೂ ಈ ಕಾರ್ಯ ಸಮರ್ಪಕವಾಗಿ ಆಗಿಲ್ಲ.
ಈ ತಿಂಗಳ ಮೊದಲ ವಾರದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಒಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ್ದು ಬಿಟ್ಟರೆ, ಆ ನಂತರ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಯಾವುದೇ ಸಭೆ ನಡೆದಿಲ್ಲ. ಚುನಾವಣೆ ಕಾರ್ಯದಲ್ಲಿ ತೊಡಗಿದ್ದರಿಂದ ಅಧಿಕಾರಿಗಳು ಕೂಡ ಇತ್ತ ಗಮನ ಹರಿಸಿರಲಿಲ್ಲ.
ಮಾರ್ಚ್ ಮಧ್ಯಭಾಗದಲ್ಲಿ ಹಾಗೂ 2–3 ದಿನಗಳಿಂದ ಈಚೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ. ಆದರೆ, ಮಳೆಯಾಗದ ಜಿಲ್ಲೆಗಳಲ್ಲಿ ಸಮಸ್ಯೆ ಈಗಲೂ ಗಂಭೀರವಾಗಿದೆ. ಅಂತಹ ಗ್ರಾಮಗಳನ್ನು ನಿಖರವಾಗಿ ಗುರುತಿಸುವ ಕಾರ್ಯ ಸರಿಯಾಗಿ ಆಗಿಲ್ಲ ಎಂಬ ಮಾಹಿತಿ ಇದೆ. ಜಲಮೂಲಗಳು ಸಂಪೂರ್ಣವಾಗಿ ಬರಿದಾಗಿರುವ ಗ್ರಾಮಗಳಿಗೆ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವೆಡೆ ಒಂದೇ ಕೊಳವೆಬಾವಿ ಇರುತ್ತದೆ. ಅದರಲ್ಲಿ ಅಗತ್ಯವಿರುವಷ್ಟು ನೀರು ಸಿಗುವುದಿಲ್ಲ.
ಆದರೂ, ಅಲ್ಲಿ ಕೊಳವೆಬಾವಿ ಇದೆ ಎಂಬುದನ್ನೇ ನೆಪ ಮಾಡಿಕೊಂಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಈ ರೀತಿಯ ತಾಂತ್ರಿಕ ಸಮಸ್ಯೆಗಳಿಂದ ಕೆಲವು ಗ್ರಾಮಗಳಲ್ಲಿ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ನೀರು, ಮೇವಿನ ವ್ಯವಸ್ಥೆಗಾಗಿ ಕಂದಾಯ ಇಲಾಖೆ ರೂ. 65 ಕೋಟಿ ಬಿಡುಗಡೆ ಮಾಡಿದೆ. ಇದಲ್ಲದೆ ಕೊಳವೆಬಾವಿ ಕೊರೆಯಲು ಪಟ್ಟಣ ಪ್ರದೇಶಗಳಿಗೆ ರೂ. 50 ಕೋಟಿ, ಹಳ್ಳಿಗಳಿಗೆ ರೂ. 20 ಕೋಟಿ ಬಿಡುಗಡೆಯಾಗಿದೆ. l
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.