ತೊಂಬತ್ತರ ದಶಕದಲ್ಲಿ ಸಿನಿಜಗತ್ತಿನಲ್ಲಿ ಹೆಸರುಗಳಿಸಿದ ಚೆಲುವೆ ಮನಿಶಾ ಕೊಯಿರಾಲಾ. ಅದ್ಭುತ ಚೆಲುವು, ಮನೋಜ್ಞ ಅಭಿನಯದ ಮೂಲಕ ಸಿನಿಪ್ರಿಯರನ್ನು ಗೆದ್ದವರು. ಅವರ ಚೆಲುವು, ಉತ್ಸಾಹವನ್ನು ಕ್ಯಾನ್ಸರ್ ಮಹಾಮಾರಿ ನುಂಗಿತ್ತು. ಆದರೆ ಅವರೊಳಗಿನ ಜೀವನಪ್ರೀತಿ ಕ್ಯಾನ್ಸರ್ ಗೆದ್ದುಬರಲು ಸಹಕಾರಿಯಾಯಿತು. ಇದೀಗ ಸಂಜಯ್ ದತ್ ಅವರ ಜೀವನಕಥೆಯನ್ನಾಧರಿಸಿದ ಚಿತ್ರದಲ್ಲಿ ನರ್ಗಿಸ್ ದತ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ರಣಬೀರ್ ಕಪೂರ್, ಸಂಜಯ್ ದತ್ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಅಂದಹಾಗೆ ಈ ಸಂಜಯ್ದತ್ ಜೀವನಗಾಥೆಯ ಚಿತ್ರವನ್ನು ರಾಜಕುಮಾರ್ ಹಿರಾನಿ ನಿರ್ದೇಶಿಸುತ್ತಿದ್ದಾರೆ. ‘ಸಿನಿಮಾ ಭಾಗವಾಗುತ್ತಿರುವುದು ಹೆಮ್ಮೆ ಎನಿಸುತ್ತಿದೆ. ನರ್ಗಿಸ್ ದತ್ ಪಾತ್ರದಲ್ಲಿ ಅಭಿನಯಿಸುವುದು ಖುಷಿ ತಂದಿದೆ. ನಾನು ಹೆಚ್ಚು ಗೌರವಿಸುವ ನಿರ್ದೇಶಕರೇ ಈ ಚಿತ್ರ ನಿರ್ದೇಶಿಸುತ್ತಿರುವುದರಿಂದ ಭರವಸೆಯೂ ಹೆಚ್ಚಿದೆ’ ಎಂದಿದ್ದಾರೆ.
ಅಂದಹಾಗೆ ಈಗ ಮನಿಶಾ ಅವರಿಗೆ ತಾಯಿಯಾಗುವ ಬಯಕೆ ಕಾಡಿದೆ. ಹೀಗಾಗಿಯೇ ಅವರು ಈ ವರ್ಷಾಂತ್ಯದಲ್ಲಿ ಒಂದು ಹೆಣ್ಣು ಮಗುವನ್ನು ದತ್ತು ಪಡೆಯುವ ನಿರ್ಧಾರವನ್ನೂ ಮಾಡಿದ್ದಾರೆ.
‘ಈ ನಿರ್ಧಾರ ಕೆಲವೊಮ್ಮೆ ಆತಂಕವನ್ನೂ ಮೂಡಿಸುತ್ತದೆ. ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಹೊರಬರಲು ಇನ್ನೂ ಹತ್ತು ವರ್ಷ ಬೇಕು ಎಂದು ವೈದ್ಯರು ಹೇಳಿದ್ದಾರೆ. ಬೇಗ ಗುಣಮುಖವಾಗಲು ಪ್ರಯತ್ನಿಸುತ್ತಲೇ ಇದ್ದೇನೆ. ನನ್ನೊಳಗಿನ ಆತ್ಮವಿಶ್ವಾಸವನ್ನು ದುಪ್ಪಟ್ಟಾಗಿಸಿಕೊಳ್ಳಬೇಕಿದೆ’ ಎಂದು ಬದುಕಿನೆಡೆಗಿನ ತಮ್ಮ ಆಸಕ್ತಿಯನ್ನು ಮನಿಷಾ ಹಂಚಿಕೊಳ್ಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.