ಹೊರಗೆ ಧೋ ಅಂತ ಮಳೆ ಸುರೀತಾ ಇರಬೇಕು. ಮಾಡಿನ ಮೇಲೆ ಮಳೆ ಹನಿಗಳು ಬಿದ್ದ ಶಬ್ದವನ್ನೂ ಆಲಿಸುತ್ತಾ ಮನೆಯೊಳಗೆ ಕುಳಿತು ಸದಾ ಕಾಡುವ ಹಾಡನ್ನು ಗುನುಗುತ್ತಲೋ, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಕಾದಂಬರಿಯನ್ನು ಓದುತ್ತಲೋ, ಚಳಿಗೆ ಹಬೆಯಾಡುತ್ತಿರುವ ಕಾಫಿ ಗುಟುಕರಿಸುತ್ತಲೋ, ಅಮ್ಮ ಸುಟ್ಟುಕೊಟ್ಟ ಹಪ್ಪಳವನ್ನು ಚಪ್ಪರಿಸುತ್ತಲೋ ಮಳೆಗಾಲದ ಆ ಸುಂದರ ಸೊಬಗನ್ನು ಆಸ್ವಾದಿಸಬೇಕು ಅಂತ ಆಲೋಚಿಸುತ್ತಲೇ ಬಾಲ್ಯಕ್ಕೆ ಜಾರಿದೆ.
ಮಳೆ ಅಂದ್ರೆ ಕೊಡಗಿನ ನೆನಪು, ಕಾವೇರಿಯ ಒನಪು. ನನ್ನ ಶಾಲಾ ದಿನಗಳ ಕೊಡಗು ಜಿಲ್ಲೆಯ ಕುಂಭದ್ರೋಣ ಮಳೆಯ ಸವಿ ಅನುಭವ ಕಣ್ಮುಂದೆ ಬಂತು. ಎಂದೂ ಮರೆಯಲಾರದ ಮಳೆ ಅದು. ಕೊಡೆ ಹೆಸರಿಗಷ್ಟೆ. ಹಳ್ಳ ತುಂಬಿ ಅಕ್ಕ-ಪಕ್ಕದ ಗದ್ದೆಯನ್ನೆಲ್ಲಾ ನೀರು ಆವರಿಸಿಕೊಂಡಾಗ ಎಲ್ಲೆಲ್ಲೂ ನೀರೇ ನೀರು. ರಜೆ ಕೊಟ್ಟರೆ ಮನೆಯಲ್ಲೇ ಕೂತು ಮಳೆ ನೋಡೋ ಸಂಭ್ರಮ. ಹಿರಿಯರೊಂದಿಗೆ ಹೋಗಿ ತುಂಬಿ ಉಕ್ಕುತ್ತಿರುವ ಕಾವೇರಿಯನ್ನು ನೋಡುವ ತವಕ. ಮರಳಿ ಬಾರದ ಆ ಮಳೆಯ ನೆನಪೇ ಮಧುರ. ಹೀಗೆ ನೆನಪಿನ ಕೊಡೆ ಹಿಡಿದು ಬರುತ್ತಾಳೆ ಕೊಡಗಿನ ಕಾವೇರಿ.
–ಸುವರ್ಚಲಾ ಅಂಬೇಕರ್ ಬಿ.ಎಸ್.,ಬಲ್ಲಾಳ್ ಬಾಗ್, ಮಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.