ನವದೆಹಲಿ(ಪಿಟಿಐ): ಟೀಂ ಇಂಡಿಯಾದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಅವರು ಶುಕ್ರವಾರ ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರಸ್ತುತ ಭಾರತ ಕ್ರಿಕೆಟ್ ತಂಡ ಕೋಚ್ ಆಗಿರುವ ಅನಿಲ್ ಕುಂಬ್ಳೆ ಮುಖ್ಯಸ್ಥರಾಗಿರುವ ಸಮಿತಿಯ ಸದಸ್ಯರಾಗಿ ಶಾಸ್ತ್ರಿ ನೇಮಕಗೊಂಡಿದ್ದರು. ಆದರೆ, ರಾಜೀನಾಮೆಗೆ ಸೂಕ್ತ ಕಾರಣವನ್ನು ಅವರು ಬಹಿರಂಗಪಡಿಸಿಲ್ಲ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ ಎಂದಷ್ಟೇ ಹೇಳಿದ್ದಾರೆ.
ಟೀಂ ಇಂಡಿಯಾದ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಮತ್ತು ಅನಿಲ್ ಕುಂಬ್ಳೆ ಅವರ ನಡುವೆ ಭಾರೀ ಪೈಪೋಟಿ ಇತ್ತು. ಆದರೆ, ಅಂತಿಮವಾಗಿ ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಕೋಚ್ ಹುದ್ದೆಗೆ ಆಯ್ಕೆಯಾದ ಅನಿಲ್ ಕುಂಬ್ಳೆ ಅವರನ್ನು ಸ್ವಾಗತಿಸಿದ ರವಿ ಶಾಸ್ತ್ರಿ, ಸಂದರ್ಶನಕ್ಕೆ ಗೈರಾಗಿದ್ದ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯ ಸೌರವ್ ಗಂಗೂಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಗಂಗೂಲಿ, ವಿಡಿಯೊ ಮೂಲಕ ಎಲ್ಲೆಂದರಲ್ಲಿ ಕುಳಿತು ಸಂದರ್ಶನದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಅಭ್ಯರ್ಥಿಯಾದವರು ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು ಎಂದು ರವಿ ಶಾಸ್ತ್ರಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.