ಕೋಲ್ಕತ್ತ: ಆರಂಭದ ಎರಡೂ ಪಂದ್ಯ ಗಳಲ್ಲಿ ಗೆಲುವು ಪಡೆದು ಸರಣಿ ಕೈವಶ ಮಾಡಿಕೊಂಡಿರುವ ಭಾರತ ತಂಡ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ನೀಡುವ ವಿಶ್ವಾಸದಲ್ಲಿದೆ.
ಏಕದಿನ ಕ್ರಿಕೆಟ್ ಮಾದರಿಗೆ ವಿರಾಟ್ ಕೊಹ್ಲಿ ನಾಯಕರಾದ ಬಳಿಕ ಭಾರತ ಆಡುತ್ತಿರುವ ಮೊದಲ ಸರಣಿ ಯಿದು. ಮೊದಲ ಅವಕಾಶದಲ್ಲೇ ಕೊಹ್ಲಿ ಬ್ಯಾಟಿಂಗ್ ಮತ್ತು ನಾಯಕತ್ವ ಎರಡ ರಲ್ಲಿಯೂ ಯಶಸ್ಸು ಕಾಣುತ್ತಿದ್ದಾರೆ.
ಭಾನುವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಇಂಗ್ಲೆಂಡ್ ಎದುರಿನ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ‘ಕ್ಲೀನ್ ಸ್ವೀಪ್’ ಮಾಡುವ ಗುರಿ ಆತಿಥೇಯರ ಮುಂದಿದೆ.
‘ಸಿಟಿ ಆಫ್ ಜಾಯ್’ ಎಂದೇ ಹೆಸರಾಗಿರುವ ಕೋಲ್ಕತ್ತದಲ್ಲಿಯೂ ಭಾರತವೇ ಗೆಲುವು ಪಡೆಯುವ ನೆಚ್ಚಿನ ತಂಡವೆನಿಸಿದೆ. ಏಕೆಂದರೆ ಹಿಂದಿನ ಎರಡೂ ಪಂದ್ಯಗಳಲ್ಲಿ ಕೊಹ್ಲಿ ಬಳಗದ ಬ್ಯಾಟಿಂಗ್ ಶಕ್ತಿ ಏನೆಂಬುದು ಸಾಬೀ ತಾಗಿದೆ. ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೊಹ್ಲಿ ಮತ್ತು ಕೇದಾರ್ ಜಾಧವ್ ಶತಕ ಗಳಿಸಿದ್ದರು. ಕಟಕ್ನಲ್ಲಿ ಜರುಗಿದ ಎರಡನೇ ಹೋರಾಟದಲ್ಲಿ ಯುವರಾಜ್ ಸಿಂಗ್ ಮತ್ತು ದೋನಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು.
ಮಧ್ಯಮ ಕ್ರಮಾಂಕದ ಎಲ್ಲಾ ಬ್ಯಾಟ್ಸ್ಮನ್ಗಳು ಉತ್ತಮ ಲಯದಲ್ಲಿ ರುವ ಕಾರಣ ಇಲ್ಲಿಯೂ ಮತ್ತೆ ರನ್ ಹೊಳೆ ಹರೆಯುವ ನಿರೀಕ್ಷೆಯಿದೆ. ಆದ್ದರಿಂದ ಎರಡೂ ತಂಡಗಳ ಬೌಲರ್ಗಳಿಗೂ ಸಂಕಷ್ಟ ಎದುರಾಗಿದೆ.
ಇಲ್ಲಿನ ಪಿಚ್ ಸ್ಪರ್ಧಾತ್ಮಕವಾಗಿರ ಲಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಒಂದು ದಿನದ ಹಿಂದೆ ಹೇಳಿದ್ದಾರೆ. ಹೀಗಾಗಿ ಗೆಲುವು ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
***
ನಾಯಕನ ಪಾತ್ರ ನಿರ್ವಹಿಸಿದ ದೋನಿ
ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದರೂ ದೋನಿ ಶನಿವಾರ ಈಡನ್ ಅಂಗಳದಲ್ಲಿ ನಾಯಕರಂತೆಯೇ ನಡೆದುಕೊಂಡರು.ಸಾಮಾನ್ಯವಾಗಿ ಪಿಚ್ ಅನ್ನು ತಂಡದ ನಾಯಕ ನೋಡುತ್ತಾರೆ. ಆದರೆ ಕೆಲ ಹೊತ್ತು ದೋನಿಯೇ ಪಿಚ್ ವೀಕ್ಷಿಸಿದರು. ಅಭ್ಯಾಸಕ್ಕೆ ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ಬಂದಿರಲಿಲ್ಲ.
ಪೂರ್ವ ತಯಾರಿ
ಐದು ತಿಂಗಳು ಕಳೆದರೆ ಮಹತ್ವದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದೆ. ಆ ಟೂರ್ನಿಗೆ ಸಜ್ಜಾಗಲು ಎಲ್ಲಾ ತಂಡಗಳಿಗೂ ಈಗ ನಡೆಯುತ್ತಿರುವ ಸರಣಿ ಅಭ್ಯಾಸಕ್ಕೆ ಉತ್ತಮ ಅವಕಾಶವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.