ಬೆಂಗಳೂರು: ಸತತ ಎರಡನೇ ವರ್ಷ ಎಎಫ್ಸಿ ಕಪ್ ಫುಟ್ಬಾಲ್ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸುವ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಕನಸು ಭಗ್ನಗೊಂಡಿತು.
ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಅಂತರ ವಲಯ ಅಂತಿಮ ಫೈನಲ್ ಪಂದ್ಯದಲ್ಲಿ ಬಿಎಫ್ಸಿ ತಂಡ ತಜಕಿಸ್ತಾನದ ಇಸ್ತಿಕಲೋಲ್ ತಂಡದೊಂದಿಗೆ 2–2 ಗೋಲುಗಳ ಡ್ರಾ ಸಾಧಿಸಿತು. ಸೆಪ್ಟೆಂಬರ್ 27ರಂದು ನಡೆದಿದ್ದ ಮೊದಲ ಫೈನಲ್ನಲ್ಲಿ 0–1ರಿಂದ ಸೋತಿದ್ದರಿಂದ ಬೆಂಗಳೂರು ಪಂದ್ಯದಲ್ಲಿ ಬಿಎಫ್ಸಿ ಕನಿಷ್ಠ ಎರಡು ಗೋಲುಗಳ ಅಂತರದಿಂದ ಜಯಿಸುವುದು ಅನಿವಾರ್ಯವಾಗಿತ್ತು. ಆದರೆ ಇದಕ್ಕೆ ತಕ್ಕಂತೆ ಆಡಲು ತಂಡಕ್ಕೆ ಸಾಧ್ಯವಾಗಲಿಲ್ಲ. ನಾಲ್ಕನೇ ನಿಮಿಷದಲ್ಲೇ ಗೋಲು ಬಿಟ್ಟು ಕೊಟ್ಟ ತಂಡ ಸಂಕಷ್ಟಕ್ಕೆ ಸಿಲುಕಿತು. ನಂತರ ಪ್ರತಿ ಹೋರಾಟ ನಡೆಸಿದರೂ ಜಯಿಸಲು ಬೆಂಗಳೂರು ತಂಡಕ್ಕೆ ಸಾಧ್ಯವಾಗಲಿಲ್ಲ.
ನಾಲ್ಕನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ನೂರುದ್ದೀನ್ ರವೊನೊವ್ ಗೋಲಿನಲ್ಲಿ ಪರಿವರ್ತಿಸಿ ಪ್ರವಾಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬೆಂಗಳೂರು ತಂಡ ಮೊದಲ ಗೋಲು ಗಳಿಸಲು 24ನೇ ನಿಮಿಷದ ವರೆಗೆ ಕಾಯಬೇಕಾಯಿತು. ರಾಹುಲ್ ಬೇಕೆ ಅವರು ಬಿಎಫ್ಸಿ ಪರ ಮೊದಲ ಗೋಲು ಗಳಿಸಿದರು. 42ನೇ ನಿಮಿಷದಲ್ಲಿ ರೆಡ್ ಕಾರ್ಡ್ ಪಡೆದುಕೊಂಡು ಹರ್ಮನ್ಜ್ಯೋತ್ ಖಾಬ್ರಾ ಹೊರ ನಡೆದಾಗ ಬಿಎಫ್ಸಿಗೆ ಭಾರಿ ಪೆಟ್ಟು ಬಿತ್ತು. ಆದರೂ 65ನೇ ನಿಮಿಷದಲ್ಲಿ ಗೋಲು ಗಳಿಸಿದ ಸುನಿಲ್ ಚೆಟ್ರಿ ಭರವಸೆ ಮೂಡಿಸಿದರು. ಆದರೆ ಅಂತಿಮ ನಿಮಿಷಗಳಲ್ಲಿ ಗೋಲು ಗಳಿಸಿದ ಇಸ್ತಿಕ್ಲೋಲ್ ತಂಡದವರು ಫೈನಲ್ಗೆ ಪ್ರವೇಶಿಸಿದರು. ಕಳೆದ ಬಾರಿಯ ರನ್ನರ್ ಅಪ್ ಬಿಎಫ್ಸಿಗೆ ಬುಧವಾರ ಜಯಿಸಲು ಸಾಕಷ್ಟು ಅವಕಾಶಗಳು ಇದ್ದವು.
31ನೇ ನಿಮಿಷದಲ್ಲಿ ಚೆಟ್ರಿ ಜೋರಾಗಿ ಒದ್ದ ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ಬಡಿದು ಹೊರಗೆ ಹೋಯಿತು. 87ನೇ ನಿಮಿಷದಲ್ಲೂ ಚೆಟ್ರಿ ಮತ್ತೊಂದು ಅವಕಾಶ ಕೈಚೆಲ್ಲಿದರು. ಅದರೊಂದಿಗೆ ಜಯ ಕೈತಪ್ಪಿತು.
ಆರೋಪ: ಪಂದ್ಯದಲ್ಲಿ ರೆಫರಿ ಮಾಡಿದ ತಪ್ಪುಗಳಿಂದಾಗಿ ತಂಡ ಮುನ್ನಡೆ ಗಳಿಸುವುದು ತಪ್ಪಿತು ಎಂದು ಬಿಎಫ್ಸಿ ಕೋಚ್ ಆಲ್ಬರ್ಟ್ ರೋಕಾ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.