ನವದೆಹಲಿ: ‘ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ಇಲ್ಲವಾದರೆ ನಾವೇ ಆ ಕೆಲಸ ಮಾಡಬೇಕಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.
ಲೋಧಾ ಸಮಿತಿ ಮಾಡಿರುವ ಶಿಫಾರಸುಗಳಲ್ಲಿ ಎಲ್ಲವನ್ನೂ ಜಾರಿಗೆ ತರಲು ಕಷ್ಟವಾಗುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಹರಿಯಾಣ ಕ್ರಿಕೆಟ್ ಸಂಸ್ಥೆ ಹೇಳಿದ್ದವು. 70 ವರ್ಷ ಮೇಲ್ಪಟ್ಟವರು ಬಿಸಿಸಿಐ ಅಧಿಕಾರದಲ್ಲಿ ಇರುವಂತಿಲ್ಲ ಎನ್ನುವ ಶಿಫಾರಸನ್ನು ಬಹುತೇಕ ರಾಜ್ಯ ಸಂಸ್ಥೆಗಳು ವಿರೋಧಿಸಿದ್ದವು.
ಆದ್ದರಿಂದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಮತ್ತು ನ್ಯಾಯ ಮೂರ್ತಿ ಎಫ್.ಎಂ. ಐ ಖಲೀಫುಲ್ಲಾ ಅವರನ್ನು ಒಳಗೊಂಡ ಪೀಠ ಕೆಲವು ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡರು.
‘ಬಿಸಿಸಿಐ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದರೆ ಎಲ್ಲಾ ರಾಜ್ಯ ಸಂಸ್ಥೆಗಳು ಅದನ್ನು ಒಪ್ಪಿಕೊಳ್ಳು ತ್ತವೆ. ಕಳಂಕ ತರುವ ಸ್ಟಾಟ್ ಫಿಕ್ಸಿಂಗ್ ನಂಥ ಘಟನೆಗಳನ್ನು ತಡೆಯಬೇಕು. ಇದೊಂದು ಗಂಭೀರ ಕೆಲಸ. ಕ್ರಿಕೆಟ್ ಆಡಳಿತ ನಡೆಸುವವರು ಇದನ್ನು ತಮಾಷೆ ಎಂದುಕೊಂಡಂತೆ ಕಾಣುತ್ತದೆ’ ಎಂದು ಠಾಕೂರ್ ಅವರು ಬಿಸಿಸಿಐಗೂ ಚಾಟಿ ಬೀಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.