ನಾಗಪುರ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿರಾಮವಿಲ್ಲದ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ವೇಳಾಪಟ್ಟಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ಸರಣಿಯ ಬಳಿಕ ಕೇವಲ ಎರಡು ದಿನಗಳ ಅಂತರದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಮಾಡಬೇಕಿದೆ.
‘ದಕ್ಷಿಣ ಆಫ್ರಿಕಾ ಎದುರಿನ ಮಹತ್ವದ ಸರಣಿಗೆ ಸಿದ್ದಗೊಳ್ಳಲು ಸಮಯ ಇಲ್ಲದಿರುವುದು ದುರದೃಷ್ಟ. ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಿದ ಬಳಿಕ ವಿರಾಮವೇ ಇಲ್ಲ. ಕೇವಲ ಎರಡು ದಿನಗಳಲ್ಲಿಯೇ ದಕ್ಷಿಣ ಆಫ್ರಿಕಾಕ್ಕೆ ಹೊರಡಬೇಕು. ಸರಣಿಗಳ ನಡುವೆ ಒಂದು ತಿಂಗಳಾದರೂ ಸಮಯ ಇರಬೇಕು’ ಎಂದು ಕೊಹ್ಲಿ ಹೇಳಿದ್ದಾರೆ.
‘ಬೇರೆ ದೇಶದ ಅಂಗಳದಲ್ಲಿ ಆಡಬೇಕಾದರೆ ಸಾಕಷ್ಟು ಪೂರ್ವಸಿದ್ದತೆ ನಡೆಸಬೇಕು. ದಕ್ಷಿಣ ಆಫ್ರಿಕಾದಂತಹ ಉತ್ತಮ ತಂಡದ ಎದುರು ಕಠಿಣ ತಾಲೀಮು ನಡೆಸಿ ಕಣಕ್ಕಿಳಿಯುವ ಅಗತ್ಯವಿದೆ’ ಎಂದು ಕೊಹ್ಲಿ ಹೇಳಿದ್ದಾರೆ.
ಡಿಸೆಂಬರ್ 24ರಂದು ಭಾರತ ತಂಡ ಶ್ರೀಲಂಕಾ ಎದುರು ಅಂತಿಮ ಟಿ–20 ಪಂದ್ಯ ಆಡಲಿದೆ. ಡಿ.27ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.