ಬೆಂಗಳೂರು: ಕರ್ನಾಟಕದ ಅಗ್ರ ಶ್ರೇಯಾಂಕದ ಆಟಗಾರ ಶೇಖರ್ ವೀರಸ್ವಾಮಿ ಹಾಗೂ ತಮಿಳುನಾಡಿನ ಬಾಲಚಂದ್ರ ಸುಬ್ರಮಣಿಯನ್ ಅವರು ಟೆಬೆಬುಯಿಯಾ ಓಪನ್ ಇಂಡಿಯಾ ವ್ಹೀಲ್ಚೇರ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ ಭಾನುವಾರ ಪೈಪೋಟಿ ನಡೆಸಲಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಶೇಖರ್ 6–1, 6–3ರಲ್ಲಿ ಆನಂದ್ ಸೆಲ್ವರಾಜ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.
ಇನ್ನೊಂದು ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಬಾಲಚಂದ್ರ 6–3, 6–2ರಲ್ಲಿ ಕರ್ನಾಟಕದ ಶಿವಪ್ರಸಾದ್ ಎದುರು ಗೆದ್ದರು.
ರಾಜ್ಯದ ಪ್ರತಿಮಾ–ಶಿಲ್ಪಾ ಪೈಪೋಟಿ: ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಟಗಾರ್ತಿಯರಾದ ಪ್ರತಿಮಾ ರಾವ್ ಹಾಗೂ ಕೆ.ಪಿ ಶಿಲ್ಪಾ ಪರಸ್ಪರ ಪೈಪೋಟಿ ನಡೆಸಲಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಪ್ರತಿಮಾ 6–2, 6–1ರಲ್ಲಿ ಅಮ್ಮು ಮೋಹನ್ ವಿರುದ್ಧವೂ, ಶಿಲ್ಪಾ 6–2, 6–0ರಲ್ಲಿ ಕರ್ನಾಟಕದವರೇ ಆದ ನಳಿನಾ ಕುಮಾರಿ ಎದುರೂ ಗೆದ್ದರು.
ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಶೇಖರ್ ವೀರಸ್ವಾಮಿ ಹಾಗೂ ಕೆ.ಗೋಪಿನಾಥ್ ಜೋಡಿ 6–1, 6–3ರಲ್ಲಿ ತಮಿಳುನಾಡಿನ ಡಿ.ಮರಿಯಪ್ಪನ್ ಮತ್ತು ಆನಂದ್ ಸೆಲ್ವರಾಜ್ ವಿರುದ್ಧವೂ, ತಮಿಳುನಾಡಿನ ಬಾಲಚಂದ್ರ ಹಾಗೂ ಕಾರ್ತಿಕ್ ಜೋಡಿ 6–2, 6–0ರಲ್ಲಿ ಶಿವಪ್ರಸಾದ್ ಹಾಗೂ ಮದುಸೂದನ್ ಮೇಲೂ ಗೆದ್ದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.