ADVERTISEMENT

‘ಹುಳುಕು ಬಯಲು ಮಾಡುವೆ’

ಐಸಿಸಿ ವಿರುದ್ಧ ಮುಸ್ತಫಾ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST

ಮೆಲ್ಬರ್ನ್‌ (ಪಿಟಿಐ): ವಿಶ್ವಕಪ್‌ ಚಾಂಪಿಯನ್‌ ತಂಡಕ್ಕೆ ಟ್ರೋಫಿ ನೀಡುವ ಅವಕಾಶವನ್ನು ತಮಗೆ ನೀಡಲಿಲ್ಲ ಎಂಬ ಕಾರಣಕ್ಕೆ ಕ್ರೋಧತಪ್ತರಾಗಿರುವ ಅಂತರರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಮುಸ್ತಫಾ ಕಮಲ್‌ ಐಸಿಸಿ  ಹುಳುಕುಗಳನ್ನು ಹೊರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಭಾನುವಾರದ ವಿಶ್ವಕಪ್ ಫೈನಲ್‌ ಪಂದ್ಯದ ಬಳಿಕ ಐಸಿಸಿ ಮುಖ್ಯಸ್ಥ ಎನ್‌. ಶ್ರೀನಿವಾಸನ್‌ ಅವರು ಸಚಿನ್ ತೆಂಡೂಲ್ಕರ್‌ ಅವರೊಂದಿಗೆ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್‌ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಿದ್ದರು.

‘2015 ಜನವರಿಯಲ್ಲಿ ಐಸಿಸಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ ಜಾಗತಿಕ ಸ್ಪರ್ಧೆಗಳಲ್ಲಿ ಐಸಿಸಿ ಅಧ್ಯಕ್ಷರು ಟ್ರೋಫಿಯನ್ನು ಹಸ್ತಾಂತರಿಸುವ ಹಕ್ಕು ಹೊಂದಿದ್ದಾರೆ’ ಎಂದು ಕಮಲ್‌ ವಾದ ಮಂಡಿಸಿದ್ದಾರೆ.

‘ಟ್ರೋಫಿ ನೀಡುವ ಸಂವಿಧಾನಿಕ ಹಕ್ಕು ನನಗಿದೆ. ಆದರೆ ಅವಕಾಶ ಸಿಗಲಿಲ್ಲ. ಐಸಿಸಿಯಲ್ಲಿ ಏನು ನಡೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ ಅನ್ನುವುದನ್ನು ಜಗತ್ತಿಗೇ ಹೇಳುತ್ತೇನೆ’ ಎಂದು ಬಾಂಗ್ಲಾದೇಶದ ಕಮಲ್‌ ಅವರು ಸುದ್ದಿಸಂಸ್ಥೆಗಳಿಗೆ ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ನಡುವಿನ ಫೈನಲ್‌ ಪಂದ್ಯ ಮುಗಿಯುವ ಮುನ್ನವೇ ಕಮಲ್ ಅವರು ಕ್ರೀಡಾಂಗಣ ಬಿಟ್ಟು ತೆರಳಿದ್ದರು.

ನಂತರ ನಡೆದ ಐಸಿಸಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು ’ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶದ ರೂಬೆಲ್‌ ಹುಸೇನ್‌ ಬೌಲಿಂಗ್‌ನಲ್ಲಿ ಭಾರತದ ರೋಹಿತ್‌ ಶರ್ಮ ಅವರನ್ನು ನಾಟೌಟ್‌ ಎಂದು ಅಂಪೈರ್‌ ತೀರ್ಪು ನೀಡಿದ್ದು ತಪ್ಪು’ ಎಂದು ವಾದಿಸಿದ್ದಾರೆ.

ಇದರಿಂದ ಕೋಪಗೊಂಡಿದ್ದ ಶ್ರೀನಿವಾಸನ್‌ ಅವರು ಮಂಡಳಿ ಸದಸ್ಯರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಐಸಿಸಿಯಲ್ಲಿ ಮೊದಲಿನಿಂದಲೂ ಅಸಮಾಧಾನ ಹೊಗೆಯಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.