ADVERTISEMENT

ವಿಮಾನದಲ್ಲಿ ತಾಂತ್ರಿಕ ದೋಷ: ವಾಪಸ್‌ ಇಳಿದ ದೆಹಲಿ ತಂಡ

ಪಿಟಿಐ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ರಿಷಭ್ ಪಂತ್‌
ರಿಷಭ್ ಪಂತ್‌   

ಇಂದೋರ್‌: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆದ ದೆಹಲಿ ತಂಡವು ಹಿಂದಿರುಗಬೇಕಾಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಆಟಗಾರರ ಪ್ರಯಾಣ ಮುಂದೂಡಲಾಯಿತು.

ಇಲ್ಲಿನ ದೇವಿ ಅಹಲ್ಯಾಬಾಯಿ ವಿಮಾನ ನಿಲ್ದಾಣದಿಂದ ಮಂಗಳವಾರ ರಾತ್ರಿ 9.20ಕ್ಕೆ ಇಂಡಿಗೊ (6ಇ–867) ವಿಮಾನ ಟೇಕ್ ಆಫ್ ಆಗಬೇಕಿತ್ತು. ಆದರೆ ಇದಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಇರುವುದು ಗೊತ್ತಾಗಿದೆ. ಹೀಗಾಗಿ ಪೈಲಟ್‌ ದಿಢೀರ್ ಬ್ರೇಕ್ ಹಾಕಿದ್ದರು. ವಿಮಾನದಲ್ಲಿ ಆಟಗಾರರು, ತಂಡದ ಸಹಾಯಕ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು ಇದ್ದರು.

ಈ ವಿಷಯವನ್ನು ತಂಡದ ಆಟಗಾರ ಉನ್ಮುಕ್ತ್ ಚಾಂದ್ ಬುಧವಾರ ತಮ್ಮ ಟ್ವಿಟರ್‌ ಖಾತೆಯಲ್ಲಿ ಬಹಿರಂಗಗೊಳಿಸಿದ್ದಾರೆ.

ADVERTISEMENT

ವಿಮಾನದಿಂದ ಇಳಿದ ಎಲ್ಲರಿಗೂ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ವಸತಿ ವ್ಯವಸ್ಥೆ ಮಾಡಿದರು. ನಾಯಕ ರಿಷಭ್‌ ಪಂತ್‌, ಧ್ರುವ್ ಶೋರೆ, ನಿತೀಶ್ ರಾಣಾ, ವಿಕಾಸ್‌ ಟೋಕಾಸ್‌ ಮತ್ತು ಆಕಾಶ್‌ ಸೂದನ್‌, ಕೋಚ್ ಕೆ.ಪಿ.ಭಾಸ್ಕರ್‌, ಆಯ್ಕೆ ಸಮಿತಿ ಮುಖ್ಯಸ್ಥ ಹರಿ ಗಿದ್ವಾನಿ ಹಾಗೂ ವ್ಯವಸ್ಥಾಪಕ ಶಂಕರ ಸೈನಿ ಇದ್ದರು.

ತಂಡದ ಹಿರಿಯ ಆಟಗಾರ ಗೌತಮ್ ಗಂಭೀರ್‌ ಮೊದಲೇ ವಾಪಸಾಗಿದ್ದರು. ವಿದರ್ಭ ವಿರುದ್ಧದ ಫೈನಲ್ ಪಂದ್ಯದಲ್ಲಿ ದೆಹಲಿ ಒಂಬತ್ತು ವಿಕೆಟ್‌ಗಳಿಂದ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.