ADVERTISEMENT

ಸೂರ್ಯ–ನಮಸ್ಕಾರ: ಕಲ್ಪನಾ ದಾರಿದ್ರ್ಯದಿಂದ ಮುಕ್ತಿ

‘ಕುಟುಂಬ’ದ ನಿಯಂತ್ರಣದಲ್ಲಿದ್ದಾಗ ವಸ್ತುಸಂಗ್ರಹಾಲಯದ ನಿರ್ವಹಣೆ ಕಳಪೆಯಾಗಿತ್ತು

ಎ.ಸೂರ್ಯ ಪ್ರಕಾಶ್
Published 21 ಮೇ 2022, 6:04 IST
Last Updated 21 ಮೇ 2022, 6:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತೀನ್‌ ಮೂರ್ತಿ ಸಂಕೀರ್ಣದಲ್ಲಿ ಇರುವ, ದೇಶದ ಅತ್ಯಂತ ಆಧುನಿಕ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿರುವ ಪ್ರಧಾನಮಂತ್ರಿ ಸಂಗ್ರಹಾಲಯವು (ಪಿಎಂಎಸ್) ಈಗ ಸಾರ್ವಜನಿಕರಿಗೆ ಮುಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ನಲ್ಲಿ ಉದ್ಘಾಟಿಸಿರುವ ಈ ವಸ್ತುಸಂಗ್ರಹಾಲಯವು ಹಿಂದಿನ ಎಲ್ಲ ಪ್ರಧಾನಿಗಳು ನೀಡಿರುವ ನಾಯಕತ್ವಕ್ಕೆ, ರಾಷ್ಟ್ರ ನಿರ್ಮಾಣಕ್ಕೆ ಅವರು ಕೊಟ್ಟ ಕೊಡುಗೆಗೆ ಗೌರವ ಸಮರ್ಪಣೆಯಂತೆ ಇದೆ.

ವಸ್ತುಸಂಗ್ರಹಾಲಯದ ಚಿಂತನೆ ಹಾಗೂ ಅಲ್ಲಿರುವ ವಸ್ತುಗಳನ್ನು ಗಮನಿಸಿದರೆ, ಇದು ಹಿಂದಿನ ಆಡಳಿತ ವ್ಯವಸ್ಥೆಗಳು ಶಾಶ್ವತಗೊಳಿಸಿದ್ದ ‘ಹೊರಹಾಕುವಿಕೆ’ ಯನ್ನು ಒಂದೇ ಏಟಿಗೆ ಕೊನೆಗೊಳಿಸಿದೆ. ಎಲ್ಲರನ್ನೂ ಒಳ ಗೊಳ್ಳುವ ಪ್ರಜಾತಾಂತ್ರಿಕ ಮೌಲ್ಯಕ್ಕೆ ಇಂಬು ಕೊಟ್ಟಿದೆ. ಆದರೆ, ಇದನ್ನು ಪ್ರಶಂಸಿಸುವ ಬದಲು ಕೆಲವರು ದೂರು ಹೇಳಲು ಆರಂಭಿಸಿದ್ದಾರೆ. ಪ್ರಧಾನಿಯಾಗಿದ್ದ ಎಲ್ಲರಿಗೂ ಇಲ್ಲಿ ಗೌರವ ಸಲ್ಲಿಸಲಾಗಿದೆ ಎಂಬ ಕಾರಣಕ್ಕೆ ಅವರು ಅಸಂತುಷ್ಟರಾಗಿದ್ದಾರೆ. ಪ್ರಜಾಪ್ರಭುತ್ವದ ಮೂಲ ತತ್ವಗಳ ಜೊತೆ ಹೊಂದಾಣಿಕೆಯಿಂದ ಇರಲು ಇಂತಹ ವ್ಯಕ್ತಿಗಳಿಗೆ ಆಗುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ.

ಇಂತಹ ವಸ್ತುಸಂಗ್ರಹಾಲಯ ಆರಂಭಿಸುವ ಆಲೋಚನೆ ಕೆಲವು ವರ್ಷಗಳ ಹಿಂದೆ ಬಂದಾಗ, ಭೂತ ಕಾಲಕ್ಕೇ ಜೋತುಬಿದ್ದವರು, ಭಾರತದ ಸ್ವಾತಂತ್ರ್ಯ, ಇಲ್ಲಿನ ಪ್ರಜಾತಂತ್ರ ಹಾಗೂ ಅಭಿವೃದ್ಧಿಗೆ ಒಂದು ಕುಟುಂಬ ಮಾತ್ರ ಕಾರಣ ಎಂಬ ಸಂಕಥನ ಅಪ್ಪಿಕೊಂಡವರು ಗಲಾಟೆ ಎಬ್ಬಿಸಿದರು. ಅವರು ಇಡೀ ಯೋಜನೆ ಸ್ಥಗಿತಗೊಳಿಸಲು ಯತ್ನಿಸಿದರು. ವಸ್ತುಸಂಗ್ರಹಾಲಯವನ್ನು ಕಟ್ಟುತ್ತಿರು
ವುದು ಜವಾಹರಲಾಲ್ ನೆಹರೂ ಅವರ ಕೊಡುಗೆಯನ್ನು ಮರೆಮಾಚಲು ಎಂದು ಇವರು ವಾದಿಸಿದರು. ಆದರೆ, ಈ ವಾದ ಎಷ್ಟು ತಪ್ಪು ಎಂಬುದು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರೆ ಗೊತ್ತಾಗುತ್ತದೆ.

ADVERTISEMENT

‘ಕುಟುಂಬ’ದ ನಿಯಂತ್ರಣದಲ್ಲಿದ್ದಾಗ ನೆಹರೂ ವಸ್ತುಸಂಗ್ರಹಾಲಯವನ್ನು ಬಹಳ ಕೆಟ್ಟದ್ದಾಗಿ ನೋಡಿ ಕೊಳ್ಳಲಾಗುತ್ತಿತ್ತು ಎಂಬುದು ಸತ್ಯ. ನೆಹರೂ ಅವರ ಕೊಡುಗೆಗಳನ್ನು ಆಸಕ್ತಿಕರವಾಗಿ ವಿವರಿಸುವ ವಿಚಾರದಲ್ಲಿ ಬದ್ಧತೆ ಇದ್ದಿರಲಿಲ್ಲ. ಇಂದು ವಸ್ತುಸಂಗ್ರಹಾಲಯದಲ್ಲಿನ ನೆಹರೂ ವಿಭಾಗವು ಹೆಚ್ಚು ಮಾಹಿತಿಪೂರ್ಣವಾಗಿದೆ. ದೇಶದ ಮೊದಲ ಪ್ರಧಾನಿಯು ‘ಆಧುನಿಕ ಭಾರತದ ದೇವಸ್ಥಾನಗಳಾದ’ ಭಾರಿ ಅಣೆಕಟ್ಟುಗಳು, ಜಲವಿದ್ಯುತ್ ಯೋಜನೆಗಳು, ಉಕ್ಕಿನ ಕಾರ್ಖಾನೆಗಳು, ತಂತ್ರಜ್ಞಾನ ಸಂಸ್ಥೆಗಳು ಮತ್ತು ಯೋಜನಾ ಆಯೋಗದ ಮೂಲಕ ನೀಡಿದ ಕೊಡುಗೆಯ ಬಗ್ಗೆ ಮೌಲಿಕ ಒಳನೋಟಗಳನ್ನು ನೀಡುತ್ತದೆ.

ನೆಹರೂ ಅವರಿಗೆ ಸಲ್ಲಬೇಕಾಗಿದ್ದ ಗೌರವ ಸಂದಿದೆ ಎಂದು ನಾನು ಹೇಳುತ್ತಿದ್ದೇನೆ. ‘ಕುಟುಂಬ’ವು ನೆಹರೂ ವಸ್ತುಸಂಗ್ರಹಾಲಯವನ್ನು ತನ್ನ ಎಸ್ಟೇಟ್ ಎಂಬಂತೆ ಭಾವಿಸಿತ್ತು. ಅದನ್ನು ಚೆನ್ನಾಗಿ ನಿರ್ವಹಿಸುತ್ತಿರಲಿಲ್ಲ. ಈಗ ವಸ್ತುಸಂಗ್ರಹಾಲಯದ ನೆಹರೂ ವಿಭಾಗದಲ್ಲಿ ಆಗಿರುವ ಬದಲಾವಣೆಯು, ‘ಕುಟುಂಬ’ವು ದೇಶವನ್ನು ಹೇಗೆ ಆಳಿತ್ತು ಮತ್ತು ಹೇಗೆ ಆಳಬೇಕಿತ್ತು ಎಂಬುದರ ಚಿತ್ರಣ ನೀಡುವಂತಿದೆ.

ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಿಂದ (ಎನ್‌ಎಂಎಂಎಲ್) ಹೊರಹಾಕಿಸಿ
ಕೊಂಡವರು ಬಹಳ ತೊಂದರೆಗೆ ಸಿಲುಕಿದ್ದಾರೆ. ಏಕೆಂದರೆ ಅವರು ಎನ್‌ಎಂಎಂಎಲ್‌ ಅನ್ನು ತಮ್ಮ ಅಡ್ಡಾ ಆಗಿಸಿಕೊಂಡಿದ್ದರು. ‘ಕುಟುಂಬ’ಕ್ಕೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರು ಎನ್‌ಎಂಎಂಎಲ್‌ನಲ್ಲಿ ಸಂಶೋಧನೆಗಳು 2014ರ ನಂತರದಲ್ಲಿ ಕಡಿಮೆಯಾಗಿವೆ, ತೀನ್‌ ಮೂರ್ತಿ ಸಂಕೀರ್ಣದಲ್ಲಿ ಕುರೂಪಿ ಕಟ್ಟಡವೊಂದು ತಲೆ ಎತ್ತುತ್ತಿದೆ ಎಂದು ಹೇಳಿದ್ದರು.

ಈಗಿನ ಸಂಗ್ರಹಾಲಯ ಕಟ್ಟಡವು ದೆಹಲಿಯ ಅತ್ಯಂತ ಆಕರ್ಷಕ ಕಟ್ಟಡವಾಗಿ ಗುರುತು ಪಡೆದುಕೊಳ್ಳು ವುದು ಖಚಿತ. ಇಲ್ಲಿ ಭವ್ಯವಾದ ವಾಸ್ತುಶಿಲ್ಪ ಯೋಜನೆಯನ್ನು ಬಹಳ ಚೆನ್ನಾಗಿ ಕಾರ್ಯರೂಪಕ್ಕೆ ತರ ಲಾಗಿದೆ. ‘ಕುಟುಂಬ’ದ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ತುಸುವಾದರೂ ಲಜ್ಜೆ ಇದ್ದಲ್ಲಿ ಅವರು ಅಂತಹ ಮಾತು ಆಡಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು.

ವಸ್ತುಸಂಗ್ರಹಾಲಯದ ವಿಚಾರವಾಗಿ ಕೆಲವು ಸಂಗತಿ ಗಳನ್ನು ನೇರವಾಗಿ ಹೇಳಬೇಕು. ದೇಶದ ಎಲ್ಲ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಹೇಳುವ ಇಂಥದ್ದೊಂದು ವಸ್ತುಸಂಗ್ರಹಾಲಯದ ಅಗತ್ಯ ಇದೆ ಎಂದು ಮೊದಲು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಎನ್‌ಎಂಎಂಎಲ್‌ನ ಅಧ್ಯಕ್ಷರಾಗಿ ಪ್ರಧಾನಿ ಅವರು ಕಾರ್ಯಕಾರಿ ಮಂಡಳಿಯ ಸದಸ್ಯರ ಜೊತೆ ಒಂದೆರಡು ಬಾರಿ ಸಮಾಲೋಚನೆ ನಡೆಸಿದ್ದರು. ವಸ್ತುಸಂಗ್ರಹಾಲಯದಲ್ಲಿ ಏನಿರಬೇಕು ಎಂಬ ಬಗ್ಗೆ ತಮ್ಮ ಸಲಹೆಗಳನ್ನು ನೀಡಿದ್ದರು. ಈ ಸಮಾಲೋಚನೆ
ಗಳಲ್ಲಿ ಮೋದಿ ಅವರು ಎರಡು ಸಂಗತಿಗಳನ್ನು ಹೇಳಿ ದ್ದರು. ಪಿಎಂಎಸ್ ನಿರ್ಮಾಣ ಮಾಡುವಾಗ ಹಿಂದಿನ ಕಲ್ಪನಾ ದಾರಿದ್ರ್ಯವನ್ನು ತೊಡೆದುಹಾಕಬೇಕು, ಹೊಸ ಆಲೋಚನೆಗಳನ್ನು ಜಾರಿಗೆ ತರಲು ಮುಕ್ತವಾಗಿರಬೇಕು ಎಂದು ಹೇಳಿದ್ದರು. ವಸ್ತುಸಂಗ್ರಹಾಲಯದ ಉದ್ಘಾ ಟನೆಯು ಒಂದು ಅರ್ಥದಲ್ಲಿ ಕಲ್ಪನಾ ದಾರಿದ್ರ್ಯದ ಕಾಲ ಮುಗಿದಿದೆ ಎಂಬುದನ್ನು ತೋರಿಸುತ್ತಿದೆ.

ಮೋದಿ ಅವರ ಮಾತುಗಳಿಗೆ ಕಿವಿಗೊಟ್ಟಾಗ ಹಾಗೂ ಅವರು ಶುರುಮಾಡಿದ ಕೆಲವು ಯೋಜನೆಗಳ ಕಡೆ ನೋಟ ಹರಿಸಿದಾಗ, 2014ಕ್ಕೂ ಹಿಂದಿನ ಆಡಳಿತ ವ್ಯವಸ್ಥೆ ಹಾಗೂ ಅದರ ನಂತರದ ಆಡಳಿತ ವ್ಯವಸ್ಥೆಗಳ ನಡುವಿನ ವ್ಯತ್ಯಾಸವು ಕಲ್ಪನಾ ದಾರಿದ್ರ್ಯ ಹಾಗೂ ಕಲ್ಪನಾ ಶ್ರೀಮಂತಿಕೆ ಎಂಬುದು ಅರಿವಾಗುತ್ತದೆ. ಮೋದಿ ಅವರು ಹೇಳಿದ್ದ ಎರಡನೆಯ ವಿಚಾರವು ‘ಸಮತೋಲನ’ಕ್ಕೆ ಸಂಬಂಧಿಸಿದ್ದು. ಪ್ರತೀ ಪ್ರಧಾನಿಯ ಅವಧಿಯಲ್ಲಿ ಆಗಿರುವ ಘಟನೆಗಳನ್ನು ಪರಿಶೀಲಿಸುವಾಗಲೂ ಸಮತೋಲನ ಇರುವಂತೆ ನೋಡಿಕೊಳ್ಳಬೇಕಿರುವುದು ಬಹಳ ಮುಖ್ಯ ಎಂದು ಮೋದಿ ಅವರು ಹೇಳಿದ್ದರು.

1947ರಿಂದ ಭಾರತ ಬೆಳೆದ ಬಗೆಯನ್ನು ಈ ವಸ್ತುಸಂಗ್ರಹಾಲಯವು ತೋರಿಸುತ್ತಿದೆ. ಈಗ, ಮೋದಿ ಅವರನ್ನು ಹೊರತುಪಡಿಸಿ ಇತರ ಎಲ್ಲ ಪ್ರಧಾನಿಗಳಿಗೆ ಸೇರಿದ ಗ್ಯಾಲರಿಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಹಿಂದೆ ಪ್ರಧಾನಿ ಆಗಿದ್ದ ‍ಪ್ರತೀ ವ್ಯಕ್ತಿಯ ಆರಂಭಿಕ ಜೀವನ, ರಾಜಕೀಯ ಜೀವನ, ಅವರು ಕೈಗೊಂಡ ಕ್ರಮಗಳು, ಅವರು ಎದುರಿಸಿದ ಸವಾಲುಗಳು ಏನಿದ್ದವು ಎಂಬು ದನ್ನು ಇಲ್ಲಿ ಕಾಣಬಹುದು. ಎಚ್.ಡಿ. ದೇವೇಗೌಡ, ಇಂದ್ರ ಕುಮಾರ್ ಗುಜ್ರಾಲ್, ಚಂದ್ರಶೇಖರ್, ಚರಣ್ ಸಿಂಗ್ ಅವರಂತೆ ಕಿರು ಅವಧಿಗೆ ಪ್ರಧಾನಿಯಾಗಿದ್ದವರ ಕುರಿತ ವಿವರಗಳೂ ಇಲ್ಲಿವೆ. ಭಾರತದ ಆರ್ಥಿಕ ಬೆಳವಣಿಗೆಯನ್ನು ಎತ್ತರಕ್ಕೆ ಒಯ್ದ ಪಿ.ವಿ. ನರಸಿಂಹ ರಾವ್, 1965ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದ ಸಂದರ್ಭ ದಲ್ಲಿ ದೇಶವನ್ನು ಮುನ್ನಡೆಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಕೂಡ ಸೂಕ್ತವಾದ ಆದ್ಯತೆ ನೀಡಲಾಗಿದೆ. ಮೊರಾರ್ಜಿ ದೇಸಾಯಿ, ಡಾ. ಮನಮೋಹನ್‌ ಸಿಂಗ್, ನೆಹರೂ–ಗಾಂಧಿ ಕುಟುಂಬದ ಮೂವರು ಪ್ರಧಾನ ಮಂತ್ರಿಗಳಿಗೆ ಸೂಕ್ತ ಆದ್ಯತೆ ನೀಡಲಾಗಿದೆ. ಎರಡು ಬಾರಿ ಕಿರು ಅವಧಿಗೆ ಪ್ರಧಾನಿಯಾಗಿದ್ದ ಗುಲ್ಜಾರಿಲಾಲ್ ನಂದಾ ಅವರ ಕೊಡುಗೆಯನ್ನೂ ಗುರುತಿಸಲಾಗಿದೆ. ಇವೆಲ್ಲ ರಾಷ್ಟ್ರೀಯ ನಾಯಕತ್ವ ಎಷ್ಟು ವೈವಿಧ್ಯಮಯವಾಗಿತ್ತು ಎಂಬುದನ್ನು, ಪ್ರಧಾನಿಯಾಗಿದ್ದವರ ಜೀವನಶೈಲಿ ಹಾಗೂ ಅವರ ಆಡಳಿತ ಎಷ್ಟು ಭಿನ್ನವಾಗಿತ್ತು ಎಂಬುದನ್ನು ತೋರಿಸುತ್ತವೆ.

ಈ ವಸ್ತುಸಂಗ್ರಹಾಲಯದಲ್ಲಿ ಹಿಂದಿನ ಕಾಲಕ್ಕೆ ಸಂಬಂಧಿಸಿದ್ದು ಎಷ್ಟಿದೆಯೋ ಮುಂದಿನದ್ದೂ ಅಷ್ಟೇ ಇದೆ ಎಂದು ಪ್ರಧಾನಿಯವರು ಉದ್ಘಾಟನೆಯ ಹೊತ್ತಿ ನಲ್ಲಿ ಹೇಳಿದರು. ಅವರು ವಸ್ತುಸಂಗ್ರಹಾಲಯದ ‘ಅನುಭೂತಿ’ ವಿಭಾಗದ ಬಗ್ಗೆ ಹಾಗೆ ಹೇಳಿದ್ದರು. ಅಲ್ಲಿ ಹಾಲೊಗ್ರಾಮ್‌ಗಳು, ವರ್ಚುವಲ್ ರಿಯಾಲಿಟಿಯ ಅನು ಭವ ಸಿಗುತ್ತದೆ. ಹೀಗಾಗಿ, ಮುಂದಿನ ಬಾರಿ ದೆಹಲಿಗೆ ಬಂದಾಗ ವಸ್ತುಸಂಗ್ರಹಾಲಯ ಭೇಟಿಯು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.