ಹೊಸಕೋಟೆ: ಮನೆಯಲ್ಲಿರುವ ದುಷ್ಟ ಶಕ್ತಿ ಓಡಿಸುವುದಾಗಿ ನಂಬಿಸಿ ಮೋಡಿ ಮಾಡುತ್ತಿದ್ದ ಫಕೀರನೊಬ್ಬನನ್ನು ಬಂಧಿಸಿರುವ ಹೊಸಕೋಟೆ ಪೊಲೀಸರು ಆತನಿಂದ 300 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.
ಶಿವಮೊಗ್ಗದ ಶಿಕಾರಿಪುರ ಮೂಲಕ ನಕಲಿ ಫಕೀರ ಸೈಯದ್ ಸಲೀಂ ಬಂಧಿತ ಆರೋಪಿ.
ಕೈಯಲ್ಲೊಂದು ತಮಟೆ, ಹಣೆಗೆ ಪೇಟಾ, ಹೆಗಲ ಮೇಲೊಂದು ಶಾಲು ಹಾಕ್ಕೊಂಡು, ಕಗ್ಗತ್ತಲ ರಾತ್ರಿಯಲ್ಲಿ ಮುಸ್ಲಿಮರ ಮನೆಗಳಿಗೆ ಭೇಟಿ ನೀಡುತ್ತಿದ್ದ ಇತ, ಮನೆಯಲ್ಲಿ ನೆಲೆಸಿರುವ ದುಷ್ಟಶಕ್ತಿ ನಾಶ ಮಾಡುತ್ತೇನೆ ಎಂದು ಮಂತ್ರ ಹಾಕಿ ಜನರನ್ನು ಮೋಸ ಮಾಡುತ್ತಿದ್ದ.
ಮನೆಯಲ್ಲಿ ಸೈತಾನ್ ಇದೆ ಎಂದು ಜನರನ್ನು ಹೆದುರಿಸಿ ಚಿನ್ನಾಭರಣಗಳನ್ನು ಒಂದು ಮಡಿಕೆಯಲ್ಲಿ ನೀರಿಗೆ ಹಾಕಿಸಿ ಎರಡು ಗಂಟೆ ನಂತರ ನೋಡುವಂತೆ ತಿಳಿಸುತ್ತಿದ್ದ, ಅದೇ ಚಿನ್ನವನ್ನು ಲಪಟಾಯಸಿ ಪರಾರಿಯಾಗುತ್ತಿದ್ದ ಎಂದು ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ.
ಒಂಟಿ ಮನೆ ಕಳ್ಳರ ಬಂಧನ
ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಲೂಟಿ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ಹೊಸಕೋಟೆ ಪೊಲೀಸರು ₹32 ಲಕ್ಷ ಮೌಲ್ಯದ ಒಟ್ಟು 502 ಗ್ರಾಂ ಚಿನ್ನವನ್ನ ವಶ ಪಡೆಸಿಕೊಂಡಿದ್ದಾರೆ.
ದೊಡ್ಡಬಳ್ಳಾಫುರ ಮತ್ತು ನೆಲಮಂಗಲ ಮೂಲದ ಭರತ್ ಮತ್ತು ಆನಂದ್ ಬಂಧಿತ ಆರೋಪಿಗಳು.
ಜೊತೆಯಲ್ಲಿ ಓದಿ ಗೆಳೆಯರಾಗಿದ್ದ ಇವರಿಬ್ಬರು ಹಣಕ್ಕಾಗಿ ಕಳ್ಳತನವನ್ನು ವೃತ್ತಿಯಾಗಿಸಿಕೊಂಡಿದ್ದರು. ಒಂಟಿ ಮನೆಗಳನ್ನು ಗುರುತಿಸಿ, ಮನೆಯ ಬೀಗ ಮುರಿದು ಚಿನ್ನಾಭರಣ ದೋಚುತ್ತಿದ್ದರು. ಹೊಸಕೋಟೆಯ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವ ಇವರನ್ನು ಹೊಸಕೋಟೆ ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದ ತಂಡ ಬಂಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.