ಗದಗ: ಪೊಲೀಸರು, ರೈತರು ಹಾಗೂ ವಕೀಲರ ನಡುವೆ ನಡೆದ ಮಾತಿನ ಜಟಾಪಟಿಯಿಂದ ಲಕ್ಕುಂಡಿ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಮೀನಿನಲ್ಲಿ ವಿಂಡ್ ಫ್ಯಾನ್ ಅಳವಡಿಸಿರುವ ಕಂಪನಿಗಳು, ಹಣದ ವಿಚಾರದಲ್ಲಿ ಮೋಸ ಮಾಡಿವೆ ಎಂದು ಆರೋಪಿಸಿ ಲಕ್ಕುಂಡಿ ಗ್ರಾಮದ ರೈತರು ಪವನ ಶಕ್ತಿ ಕಂಪನಿ ಅಧಿಕಾರಿಗಳನ್ನು ಮಂಗಳವಾರ ಗ್ರಾಮ ಪಂಚಾಯ್ತಿ ಆವರಣದಲ್ಲಿ ಕೂಡಿ ಹಾಕಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗದಗ ಗ್ರಾಮಾಂತರ ಠಾಣೆ ಪೊಲೀಸರು ಕೂಡಿ ಹಾಕಿರುವ ಸಿಬ್ಬಂದಿಯನ್ನು ಬಿಡಿಸಿ ಕರೆದೊಯ್ಯುವ ಸಂದರ್ಭದಲ್ಲಿ ರೈತರು ಅಡ್ಡಿಪಡಿಸಿದರು. ಆಗ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಹಾಗೂ ದೂಕಾಟ, ತಳ್ಳಾಟ ನಡೆದಿದೆ. ಗದ್ದಲದಲ್ಲಿ ಕಾಲರ್ ಹಿಡಿದು ಎಳೆದಾಡಿಕೊಂಡಿದ್ದಾರೆ.
ರೈತರ ಪರ ವಕಾಲತ್ತು ವಹಿಸಿದ್ದ ವಕೀಲರನ್ನೂ ಪೊಲೀಸರು ದೂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ಗ್ರಾಮ ಪಂಚಾಯ್ತಿಯಿಂದ ಎನ್ಒಸಿ ಪಡೆಯದೇ ವಿಂಡ್ ಫ್ಯಾನ್ಗಳನ್ನು ಅಳವಡಿಸಲಾಗಿದೆ. ಜಮೀನು ಗುತ್ತಿಗೆ ಪಡೆದಿರುವ ಕಂಪನಿ ರೈತರಿಗೂ ಮೋಸ ಮಾಡಿದೆ. ಇದಕ್ಕೆ ಮಧ್ಯವರ್ತಿಗಳೇ ಸೂತ್ರಧಾರರು’ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
‘ಗುತ್ತಿಗೆ ಹಣದ ವಿಚಾರವಾಗಿ ರೈತರು ಪವನಶಕ್ತಿ ಕಂಪನಿಯ ಕೆಳದರ್ಜೆಯ ಅಧಿಕಾರಿಗಳನ್ನು ಕೂಡಿಹಾಕಿದ್ದರು. ನಾವು ಸಾಮಾನ್ಯ ಸಿಬ್ಬಂದಿ. ನಮ್ಮಿಂದ ನಿಮ್ಮ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ನಿಮ್ಮ ಯಾವುದೇ ಬೇಡಿಕೆಗಳಿದ್ದರೂ ಮೇಲಧಿಕಾರಿಗಳಿಗೆ ತಿಳಿಸಿ ಎಂದು ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದರು. ನಾವು ಕೂಡ ಈ ವಿಷಯವನ್ನೇ ರೈತರಿಗೆ ಹೇಳಿ ಅವರನ್ನು ಕರೆದೊಯ್ಯುವ ಸಂದರ್ಭದಲ್ಲಿ ಮಾತಿನ ಚಕಮಕಿ, ತಳ್ಳಾಟ ನಡೆಯಿತು’ ಎಂದು ಗದಗ ಗ್ರಾಮಾಂತರ ಠಾಣೆ ಸಿಪಿಐ ಚಂದ್ರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘30 ವರ್ಷಗಳ ಗುತ್ತಿಗೆ ಹಣವನ್ನು ಒಮ್ಮೆಲೇ ಕೊಡಬೇಕು ಎಂಬುದು ರೈತರ ಸದ್ಯದ ಬೇಡಿಕೆ ಆಗಿದೆ. ಆದರೆ, ಒಪ್ಪಂದದಲ್ಲಿನ ನಿಯಮಗಳಂತೆ ಅದಕ್ಕೆ ಅವಕಾಶವಿಲ್ಲ. ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದ್ದು, ರೈತರು ಹಾಗೂ ಕಂಪನಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.