ADVERTISEMENT

ಕಾರವಾರ | ಅಶಕ್ತರಿಗೆ ಅಂಚೆ ಮತದಾನದ ವ್ಯವಸ್ಥೆ

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 8:41 IST
Last Updated 21 ಮಾರ್ಚ್ 2023, 8:41 IST
ಪ್ರಭುಲಿಂಗ ಕವಳಿಕಟ್ಟಿ
ಪ್ರಭುಲಿಂಗ ಕವಳಿಕಟ್ಟಿ   

ಕಾರವಾರ: ‘80 ವರ್ಷ ಮೇಲ್ಪಟ್ಟ ವೃದ್ಧರು ಮತ್ತು ಮತಗಟ್ಟೆಗೆ ಬರಲಾಗದ ಅಂಗವಿಕಲರಿಗೆ ಅವರ ಇಚ್ಛೆಗೆ ಅನುಸಾರ ಅಂಚೆ ಮತದಾನದ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

‘ಚುನಾವಣಾ ಆಯೋಗದ ನಿರ್ದೇಶನದಂತೆ ಅಂತಹ ಮತದಾರರಿಗೆ ಅರ್ಜಿ ನಮೂನೆ ಮುಂಚಿತವಾಗಿ ನೀಡಲಾಗುವುದು. ಅವರು ಅಶಕ್ತರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು. ಮತಗಟ್ಟೆಗೆ ಬರಲು ಉತ್ತೇಜಿಸಲು ಆದ್ಯತೆ ನೀಡಲಾಗುವುದು. ಸಾಧ್ಯವಾಗದಿದ್ದರೆ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು. 80 ವರ್ಷ ಮೇಲ್ಪಟ್ಟ 27,399 ಮತ್ತು 14,724 ಅಂಗವಿಕಲ ಮತದಾರರು ಜಿಲ್ಲೆಯಲ್ಲಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಚುನಾವಣೆಗೆ 1435 ಮತಗಟ್ಟೆಗಳನ್ನು ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತಲಾ 2 ಯುವ ಸಿಬ್ಬಂದಿ ಮತಗಟ್ಟೆ, ಮಹಿಳಾ ಸಿಬ್ಬಂದಿಗಳೆ ಕಾರ್ಯನಿರ್ವಹಿಸುವ 30, ಅಂಗವಿಕಲ ಸಿಬ್ಬಂದಿ ಕಾರ್ಯಾಚರಿಸುವ 12, ಬುಡಕಟ್ಟು ಸೇರಿದಂತೆ ಜಿಲ್ಲೆಯ ವಿಶೇಷತೆ ಸಾರುವ ಮಾದರಿಯ 12 ಮತಗಟ್ಟೆ ಸ್ಥಾಪಿಸಲಾಗುವುದು’ ಎಂದರು.

ADVERTISEMENT

‘ಮಾರ್ಚ್ 3ರವರೆಗೆ ಸಿದ್ಧಗೊಂಡಿರುವ ಪಟ್ಟಿಯಲ್ಲಿ 11,83,461 ಮತದಾರರಿದ್ದಾರೆ. 199 ಸೂಕ್ಷ್ಮ, 55 ಅತಿ ಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದೆ. 2344 ಬೂತ್ ಮಟ್ಟದ ಏಜೆಂಟ್ ನೇಮಕವಾಗಿದೆ. ಎಲ್ಲ ಮತಗಟ್ಟೆಯಲ್ಲಿ ಏಜೆಂಟ್ ನೇಮಿಸಲು ರಾಜಕೀಯ ಪಕ್ಷಗಳು ಮುಂದಾಗಬೇಕು’ ಎಂದರು.

‘ಅಕ್ರಮ ತಡೆಯುವ ದೃಷ್ಟಿಯಿಂದ 3 ಅಂತರ್ ರಾಜ್ಯ, 14 ಅಂತರ್ ಜಿಲ್ಲೆ ಸೇರಿದಂತೆ ಒಟ್ಟೂ 25 ತಪಾಸಣೆ ನಾಕೆ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 1015 ಮಂದಿ ರೌಡಿ ಶೀಟರ್‍ ಗಳಿದ್ದಾರೆ. 3 ಮಂದಿಯನ್ನು ಗಡಿಪಾರು ಮಾಡಲಾಗಿದೆ. ನಾಲ್ವರ ಗಡಿಪಾರು ವಿಚಾರಣೆ ಹಂತದಲ್ಲಿದೆ’ ಎಂದರು.

‘ಎಂಟು ಕಡೆಗಳಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ ಬಂದಿದ್ದವು.‌ ಮೂಲಸೌಕರ್ಯ ಒದಗಿಸಲು ಆಗ್ರಹಿಸಿ ಜನ ಈ ನಿರ್ಧಾರಕ್ಕೆ ಬಂದಿದ್ದರು. ಅವರ ಮನವೊಲಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಗ್ರಾಮಕ್ಕೆ ಕಳಿಸಿ ಜನರ ಮನವೊಲಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.