ADVERTISEMENT

2 ‘ಎ’ ಮೀಸಲಾತಿ ಮುಂದುವರಿಕೆಗೆ ಗಾಣಿಗರ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 15:36 IST
Last Updated 21 ಮಾರ್ಚ್ 2023, 15:36 IST
ವಿಜಯಪುರ ಜಿಲ್ಲಾ ಗಾಣಿಗ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು 
ವಿಜಯಪುರ ಜಿಲ್ಲಾ ಗಾಣಿಗ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು    

ವಿಜಯಪುರ: ಹಿಂದೂ ಗಾಣಿಗ ಸಮಾಜ ಸೇರಿ 18 ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ 2 ‘ಎ’ ದಿಂದ ಕೈಬಿಟ್ಟು 3 ‘ಬಿ’ಗೆ ಸೇರಿಸಲು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿ ವಿರೋಧಿಸಿ, ಯಥಾ ಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಗಾಣಿಗ ಸಮಾಜದಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಅಖಿಲ ಭಾರತ ಗಾಣಿಗ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಗಾಣಿಗ ಸಮಾಜಕ್ಕೆ ಮೀಸಲಾತಿ‌ ಅಗತ್ಯತೆ ಮನಗಂಡು ಎಲ್.ಜಿ.ಹಾವನೂರ ಮತ್ತು ಚಿನ್ನಪ್ಪರೆಡ್ಡಿ ಆಯೋಗಗಳು ಗಾಣಿಗ ಸಮುದಾಯಕ್ಕೆ ಪ್ರವರ್ಗ 2 ‘ಎ’ ಮೀಸಲಾತಿ ಕಲ್ಪಿಸಬೇಕೆಂದು ಶಿಫಾರಸು ಮಾಡಿ ವರದಿ ಸಲ್ಲಿಸಿದ ಹಿನ್ನೆಲೆ ಸಮಾಜಕ್ಕೆ 2 ‘ಎ’ ಮೀಸಲಾತಿ ಸಿಕ್ಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಗಾಣಿಗ ಎಲ್ಲಾ ಒಳಪಂಗಡಗಳು ಸೇರಿ ಸುಮಾರು 50-60 ಲಕ್ಷ ಜನಸಂಖ್ಯೆ ಇದ್ದು, ಇನ್ನೂ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಿಂದ ವಂಚಿತವಾಗಿದೆ. ಇಲ್ಲಿಯವರೆಗೂ ಕೇವಲ ಮೂರ್ನಾಲ್ಕು ಜನ ಮಾತ್ರ ಶಾಸಕರಿದ್ದು, ಸಚಿವ ಸ್ಥಾನ ಸಹ ಸಿಕ್ಕಿಲ್ಲ. ಇತ್ತೀಚೆಗೆ ಕೆಲವು ನಾಯಕರಿಗೆ ಅಲ್ಪ ಅವಧಿಗೆ ಮಾತ್ರ ಸಚಿವ ಸ್ಥಾನ ಲಭಿಸಿದೆ. ಸಮಾಜ ರಾಜಕೀಯವಾಗಿಯೂ ಅತ್ಯಂತ ಹಿಂದುಳಿದಿದೆ. ರಾಜ್ಯದಲ್ಲಿ ಹುಡುಕಿದರೆ ಗಾಣಿಗ ಸಮಾಜದ ಬೆರಳೆಣಿಕೆಯಷ್ಟು ಜನ ಮಾತ್ರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದು, ಶೈಕ್ಷಣಿಕವಾಗಿ ಹಿಂದುಳಿದಿದೆ. ಅಲ್ಲದೇ, ಸಾಮಾಜಿಕವಾಗಿಯೂ ಇನ್ನೂ ಗ್ರಾಮೀಣ ಭಾಗದಲ್ಲಿ ಸಮಾಜದವರು ತುಳಿತಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ADVERTISEMENT

ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಸಮಾಜವನ್ನು ಆಧ್ಯಯನ ಮಾಡದೇ ಗಾಣಿಗ ಸಮಾಜ ಸೇರಿ ಇತರೆ 18 ಉಪಜಾತಿಗಳನ್ನು 2 ‘ಎ’ ಪ್ರವರ್ಗದಿಂದ ಕೈಬಿಟ್ಟು 3 ‘ಬಿ’ಗೆ ಸೇರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಖಂಡನೀಯ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರ್ಕಾರದ ಕೊನೆಯ ಸಚಿವ ಸಂಪುಟದಲ್ಲಿ ಹಿಂದುಳಿದ ಆಯೋಗದ ಈ ವರದಿಯನ್ನು ತಿರಸ್ಕರಿಸಬೇಕು. ಒಂದು ವೇಳೆ ವರದಿಯನ್ನು ಪುರಸ್ಕರಿಸಿ ಗಾಣಿಗ ಸಮಾಜದ 2 ‘ಎ’ ಮೀಸಲಾತಿ ಕೈಬಿಟ್ಟರೆ ಸಮಾಜ ಉಗ್ರ ಹೋರಾಟಕ್ಕೆ ಮುಂದಾಗಲಿದೆ. ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊಲ್ಹಾರದ ಕಲ್ಲಿನಾಥ ಸ್ವಾಮೀಜಿ, ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಜಲ್ಲಾ‌ ಗೌರವಾಧ್ಯಕ್ಷ ಬಿ.ಎಂ. ಪಾಟೀಲ್ ಕತ್ನಳ್ಳಿ, ಕಾರ್ಯಾಧ್ಯಕ್ಷ ಅಶೋಕ ತರಡಿ, ಮುಖಂಡರಾದ ಎಸ್.ಜಿ.ಲೋಣಿ, ಶರಣಪ್ಪ ಶ್ಯಾಪೇಟಿ, ಶ್ರೀಕಾಂತ ಶಿರಡೋಣ, ಎಸ್.ಎಸ್.ಅರಕೇರಿ, ಬಾಬು ಸಜ್ಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.