ಬೆಂಗಳೂರು: ‘ಕನ್ನಡ ನಾಟಕ ಅಕಾಡೆಮಿಯ 2020–21ರ ಸಾಲಿನ ಪ್ರಶಸ್ತಿ ಘೋಷಣೆ ವೇಳೆ ಯುವಸಾಧಕರಿಗೆ ಆದ್ಯತೆ ನೀಡದಿರುವುದು ಸರಿಯಲ್ಲ. ಯುವ ಕಲಾವಿದರಿಗೂ ಪ್ರಶಸ್ತಿಗೆ ಪರಿಗಣಿಸಬೇಕು’ ಎಂದು ರಂಗನಟ ಆರ್. ವೆಂಕಟರಾಜು ಒತ್ತಾಯಿಸಿದ್ದಾರೆ.
‘ರಂಗಭೂಮಿಯು ನಿತ್ಯ ಚಲನಶೀಲವಾಗಿರಲು ಯುವಕರ ಭಾಗವಹಿಸುವಿಕೆ ಹಾಗೂ ಅವರ ಚೈತನ್ಯ ಶಕ್ತಿ ಪ್ರಮುಖ ಸಾಧನ. ನಾಟಕ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆ ಮುನ್ನಡೆಸುವಲ್ಲಿ ಯುವಕರ ಶಕ್ತಿ ಹಿರಿದು. ಅವರಿಗೆ ಪ್ರಶಸ್ತಿ ಘೋಷಿಸಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಯುವಕರನ್ನು ಸಂಪೂರ್ಣ ಹೊರಗಿಡಲು ಇದೇನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅಲ್ಲ. ರಾಜ್ಯೋತ್ಸವ ಪ್ರಶಸ್ತಿಗೆ ಆ ಅನಿವಾರ್ಯತೆ ಇರಬಹುದು. ನಾಟಕ ಅಕಾಡೆಮಿ ಪ್ರಶಸ್ತಿ ನೀಡುವಲ್ಲಿ ಯುವಕರಿಗೆ ಸಮಪಾಲು ನೀಡದಿದ್ದರೂ, ಒಂದು ನಿರ್ದಿಷ್ಟ ಅನುಪಾತ ಅನುಸರಿಸಿ ಯುವಕರ ರಂಗ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಿದರೆ ಹೆಚ್ಚಿನ ಪ್ರೋತ್ಸಾಹ ಲಭಿಸಿದಂತಾಗುತ್ತದೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ಸಾಧನೆಯ ಹಾದಿಯಲ್ಲಿ ಇರುವುದಕ್ಕಿಂತಲೂ, ದಶಕಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದವರಿಗೆ ಪ್ರಶಸ್ತಿ ನೀಡಲು ಆದ್ಯತೆ ನೀಡಬೇಕಾಗುತ್ತದೆ. ಆದರೆ, ಯುವ ಕಲಾವಿದರಿಗೆ ಪ್ರಶಸ್ತಿ ನೀಡಬಾರದು ಎಂದಲ್ಲ. ನಿರ್ದಿಷ್ಟ ಅನುಪಾತ ಅನುಸರಿಸಿ ಮುಂದಿನ ವರ್ಷದಿಂದ ಯುವ ಕಲಾವಿದರಿಗೂ ಪ್ರಶಸ್ತಿ ನೀಡಲಾಗುವುದು’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಆರ್. ಭೀಮಸೇನ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.