‘ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಮೊಹಮ್ಮದ್ ಅಲಿ ಜಿನ್ನಾ ಅವರು, ಆಗ ಖ್ಯಾತ ವಕೀಲರಾಗಿದ್ದರು. ಆದರೆ, ಸ್ವಾತಂತ್ರ್ಯ ಹೋರಾಟಗಾರ ಭಗತ್ಸಿಂಗ್ ಅವರ ಪರವಾಗಿ ಯಾರೂ ವಕಾಲತ್ತು ವಹಿಸಿಕೊಳ್ಳಲಿಲ್ಲ. ಹೀಗಾಗಿ ಅವರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಆಗಲಿಲ್ಲ’ ಎಂಬುದಾಗಿ ರಿಷಿ ಬಾಗ್ರೆ ಎಂಬುವರು ಟ್ವೀಟ್ ಮಾಡಿದ್ದಾರೆ. ಇದನ್ನು ಹಲವು ಟ್ವಿಟರ್ ಖಾತೆಗಳು ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಗಾಂಧೀಜಿ, ನೆಹರೂ ಹಾಗೂ ಜಿನ್ನಾ ಅವರು ಭಗತ್ಸಿಂಗ್ ನೆರವಿಗೆ ಬರಲಿಲ್ಲ ಎಂಬುದು ಸರಿಯಾದ ಮಾಹಿತಿ ಅಲ್ಲ ಎಂದು ‘ಲಾಜಿಕಲ್ ಇಂಡಿಯನ್’ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. 1928ರ ಲಾಹೋರ್ ಸಂಚು ಹಾಗೂ 1929ರ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಗತ್ಸಿಂಗ್ ಆರೋಪಿಯಾಗಿದ್ದರು. ತಮ್ಮ ಪರ ವಾದ ಮಾಡಲು ವಕೀಲರು ಬೇಡ, ಕಾನೂನು ಸಲಹೆಗಾರರು ಸಾಕು ಎಂದು ಸ್ವತಃ ಭಗತ್ಸಿಂಗ್ ತಮ್ಮ ಕುಟುಂಬದವರಿಗೆ ತಿಳಿಸಿದ್ದರು ಎಂಬ ಅಂಶವು ಕಾನೂನು ತಜ್ಞ ಎ.ಜೆ.ನೂರಾನಿ ಅವರ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಭಗತ್ಸಿಂಗ್ ಅವರನ್ನು ನೆಹರೂ ಅವರು ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. 1931ರ ಮಾರ್ಚ್ 19ರಂದು ವೈಸ್ರಾಯ್ ಲಾರ್ಡ್ ಇರ್ವಿನ್ ಅವರನ್ನು ಭೇಟಿ ಮಾಡಿದ್ದ ಗಾಂಧೀಜಿ, ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.