ಅಳುತ್ತಿರುವ 29 ವರ್ಷದ ಯುವಕನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಇವರ ಹೆಸರು ರಾಜೇಶ್ ತಿವಾರಿ. ಉತ್ತರ ಪ್ರದೇಶದ ಲಖನೌದವರು. ಯುಪಿಎಸ್ಪಿ ಪರೀಕ್ಷೆಯಲ್ಲಿ 643 ಅಂಕಗಳನ್ನು ಪಡೆದಿದ್ದರೂ ಉತ್ತೀರ್ಣರಾಗಲು ವಿಫಲರಾಗಿದ್ದಾರೆ. ಸಾಮಾನ್ಯ ವರ್ಗದ (ಜನರಲ್ ಕೆಟಗರಿ) ಕಟ್ ಆಫ್ ಅಂಕ 689ಕ್ಕೆ ನಿಗದಿಯಾಗಿದೆ. ಆದರೆ ಪರಿಶಿಷ್ಟ ಜಾತಿ/ವರ್ಗದ ಕಟ್ ಆಫ್ 601 ಅಂಕಕ್ಕೆ ನಿಗದಿಯಾಗಿದೆ. ಮೀಸಲಾತಿ ತುಷ್ಟೀಕರಣ ಇನ್ನಾದರೂ ನಿಲ್ಲಲಿ. ಉತ್ತಮ ಅಂಕ ಪಡೆದ ಎಲ್ಲ ಸಮುದಾಯದವರನ್ನೂ ಒಂದೇ ಎಂದು ಪರಿಗಣಿಸಿ’ ಎಂಬ ಅರ್ಥದ ಪೋಸ್ಟ್ಗಳು ಹರಿದಾಡುತ್ತಿವೆ.
ರಿವರ್ಸ್ ಇಮೇಜ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ ಈ ಚಿತ್ರದಲ್ಲಿರುವ ವ್ಯಕ್ತಿ ರಾಜೇಶ್ ತಿವಾರಿ ಅಲ್ಲ, ಬಾಂಗ್ಲಾದೇಶದ ಟೆಕ್ಸ್ಟೈಲ್ಸ್ ಎಂಜಿನಿಯರ್ ಸಯೀದ್ ರಿಮನ್ ಎಂಬುದು ಗೊತ್ತಾಗಿದೆ. ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಅವರು ನಡೆಸುತ್ತಾರೆ. 2016ರಲ್ಲಿ ಬಾಂಗ್ಲಾದೇಶದ ನಿರುದ್ಯೋಗ ಸಮಸ್ಯೆ ಇಟ್ಟುಕೊಂಡು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಚಿತ್ರವನ್ನು ಪ್ರಕಟಿಸಿದ್ದರು. ಕೋವಿಡ್ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಕಟ್ ಆಫ್ ಅಂಕಗಳನ್ನು ಯುಪಿಎಸ್ಸಿ ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಈ ಚಿತ್ರಕ್ಕೂ, ರಾಜೇಶ್ ತಿವಾರಿ ಎಂಬ ವ್ಯಕ್ತಿಗೂ, ಯುಪಿಎಸ್ಸಿಗೂ ಸಂಬಂಧವಿಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.