ADVERTISEMENT

ಚುರುಮುರಿ: ಪರೀಕ್ಷೆ ಸಮಯ

ಲಿಂಗರಾಜು ಡಿ.ಎಸ್
Published 7 ಜೂನ್ 2021, 18:58 IST
Last Updated 7 ಜೂನ್ 2021, 18:58 IST
ಚುರುಮುರಿ
ಚುರುಮುರಿ   

‘ಊರುಮ್ಯಾಲೆ ಊರು ಬಿದ್ರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾಡದೇಯ ಅಂತ ಸೂರೇಶಣ್ಣ ಅಡರಗಾಲಾಕ್ಕ್ಯಂಡು ಕೂತದಲ್ಲಾ ಸಾ!’ ಅಂತ ಕೇಳಿದೆ.

‘ಆಚಾರ ಕೆಟ್ರೂ ಆಕಾರ ಕೆಡಬಾರದು ಅಂತ ಈಗ ಎಸ್ಸೆಸ್ಸೆಲ್ಸಿ ಮಕ್ಕಳ ಗ್ಯಾಮಾಳೆ ಅದುಮಿಕ್ಯಂಡು ಕೂತವರೆ! ದೇಸದೇಲಿ ಇನ್ನೂ ಥರಾವರಿ ಪರೀಕ್ಷೆಗಳು ನಡಿತಾ ಅವೆ. ಅವುನ್ನೂ ತಿಳಕಂಡು ಗೆನರಲ್ ನಾಲೆಡ್ಜ್ ಜಾಸ್ತಿ ಮಾಡಿಕ್ಯಳ್ರೋ!’ ಅಂದ್ರು ತುರೇಮಣೆ.

‘ಕೊರೊನಾ ಪರ್ಸೆಂಟೇಜು ಐದಕ್ಕಿಳಿಸಬೇಕು ಅಂತ ಬಿಬಿಎಂಪಿಗೆ ಪರೀಕ್ಸೆ ಕೊಟ್ಟಿರದ ಕಂಡು ಜನ ಕೊರೊನಾ ಪರೀಕ್ಷೆ ಮಾಡಿಸ್ಕಳಕೇ ಹೆದರಿ ವಾಟವೊಡೀತಾವ್ರೆ!’ ಅಂದ್ರು ಯಂಟಪ್ಪಣ್ಣ.

ADVERTISEMENT

‘ಮೋದಿಗೂ ದೀದಿಗೂ ರಾಜತಂತ್ರದ ಬಡಾಯಿ ಪರೀಕ್ಷೆ ನಡೀತಾ ಅದೆ! ರಾಜಾವುಲಿ ಇನ್ನೊಂದ್ಸಾರಿ ಸಿಎಂ ಪರೀಕ್ಷೆ ಕಟ್ಟಿ ಪಾಸು ಮಾಡಬೇಕು ಅಂತ ಸಿಎಂ ಪದವಿ ಪರೀಕ್ಷಾ ಮಂಡಲಿ ಹೇಳ್ಯದಂತೆ. ಮರಿರಾಜಾವುಲಿ ‘ನಂಗೂ ಏಜಾಗ್ಯದೆ, ಅದ್ಯಕ್ಸರ ಪರೀಕ್ಷೆ ಬರೀತೀನಿ’ ಅಂತ ಅರ್ಜಿ ವಗಾಯ್ಸಿರದು ನೋಡಿದ ಕಟೀಲಣ್ಣ ‘ಸೀಟು ಖಾಲಿ ಇಜ್ಜಿ ಮಾರಾಯ! ಆ ಜೋಕ್ಲಿಗೆ ಯಂತ ಗೊತ್ತಾಪುಂಡು!’ ಅಂತ ನಷ್ಟೋತ್ತರ ಹಾಡ್ತಾವ್ರಂತೆ! ಡಿಕೆ, ಹುಲಿಯಾ, ಕುಮಾರಣ್ಣ ಸಿಎಂ ಎಂಟ್ರೆನ್ಸ್ ಟೆಸ್ಟೇಲಿ ಪಸ್ಟು ಬರಬೇಕು ಅಂತ ಕಾಪಿಚೀಟಿ ಬರಕಂದು ಕೂತವ್ರೆ. ಯತ್ನಾಳಣ್ಣ ಬಿಜೆಪಿ ಹಾಲ್‍ಟಿಕೇಟೆ ಹರಿದಾಕಿ ಕೂತದೆ! ಅಡಗೂರು ಇಸ್ವಣ್ಣ ‘ನನಗೇನು ಏಜ್‍ಬಾರಾಗಿಲ್ಲ, ಗಾಂಧಿ ಪಾಸ್ ಮಾಡಿ ಮಂತ್ರಿ ಮಾಡಿ’ ಅಂತ ಮುಲುಕ್ತಾ ಅದೆ!’ ಅಂದ್ರು.

ನಾನು ಮಧ್ಯ ಬಾಯಿ ಹಾಕಿ ‘ಸಾ, ಇವೆಲ್ಲಾ ಕಾಲು-ಬಾಯಿ ಜ್ವರ ಅಲ್ಲುವುರಾ?’ ಕೇಳಿದೆ.

‘ಆಯ್ತು ಕನಪ್ಪಾ ಸರದಾರ, ಇದರಗೆಲ್ಲಾ ನಿಜವಾದ ಪರೀಕ್ಸೆ ಯಾರಿಗೆ?’ ಅಂತು ಯಂಟಪ್ಪಣ್ಣ.

‘ಯಂಟಪ್ಪಣ್ಣ, 365 ದಿನವೂ ಒಂದಲ್ಲಾ ಒಂದು ಪರೀಕ್ಸೆ ಸತ್ಪ್ರಜೆಗಳಿಗೇ ಅಲ್ಲುವರಾ? ಅದೇಟು ಪಡಿಪಾಟಲು ಬಿದ್ರೂ ಅವರೇ ಪೇಲಾಗದು!’ ಕುರಿತೇಟಾದ ಮಾತು ಕೇಳಿ ತಲೆ ತಿಪುರಚಂಡಾಗೋಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.