ADVERTISEMENT

ಮೇಳದಲ್ಲಿ ಕಂಡ ಗಣಪೆ ಕಾಯಿ ಕೀಚೈನ್‌

ಕೃಷ್ಣಿ ಶಿರೂರ
Published 21 ಸೆಪ್ಟೆಂಬರ್ 2022, 6:22 IST
Last Updated 21 ಸೆಪ್ಟೆಂಬರ್ 2022, 6:22 IST
ಶಿರಸಿಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೃಷಿ ಮೇಳದಲ್ಲಿಟ್ಟ ಗಣಪೆ ಕಾಯಿ ಕೀಚೈನ್‌ ಹಾಗೂ ರುದ್ರಾಕ್ಷಿ ಸರ
ಶಿರಸಿಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೃಷಿ ಮೇಳದಲ್ಲಿಟ್ಟ ಗಣಪೆ ಕಾಯಿ ಕೀಚೈನ್‌ ಹಾಗೂ ರುದ್ರಾಕ್ಷಿ ಸರ   

ಧಾರವಾಡ: ಮಲೆನಾಡಿನ ದಟ್ಟ ಕಾಡಿನಲ್ಲಿ ಕಾಣಸಿಗುವ ಗಣಪೆಕಾಯಿಗಳು ಈ ಬಾರಿಯ ಕೃಷಿ ಮೇಳದಲ್ಲಿ ಕೀಚೈನ್‌ ಆಗಿ ಗಮನ ಸೆಳೆದವು.

ಶಿರಸಿಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗಣಪೆ ಕಾಯಿಗಳ ಕೀಚೈನ್‌ ಮಾಡುವ ಮೂಲಕ ಕಾಡಿನಲ್ಲಿ ಬಿದ್ದು ಗಿಡವಾಗುವ ಗಣಪೆಕಾಯಿಗಳ (entada rheedii seeds) ಮೌಲ್ಯವರ್ಧನೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕಿನ ಕಾಡುಗಳಲ್ಲಿ ಗಣಪೆಕಾಯಿಗಳು ಹೇರಳವಾಗಿ ಸಿಗುತ್ತವೆ.

ಬೃಹದಾಕಾರದ ಮರಕ್ಕೆ ಬಳ್ಳಿ ರೂಪದಲ್ಲಿ ಹಬ್ಬುವ ಈ ಸಸ್ಯ ನೂರಾರು ವರ್ಷಗಳ ಇತಿಹಾಸದೊಂದಿಗೆ ಮರಗಳಂತೆ ಎತ್ತರಕ್ಕೇರಿ ಮಾರುದ್ದದ ಬೀನ್ಸ್‌ ಆಕಾರದ ಕೋಡುಗಳನ್ನು ಬೀಡುತ್ತದೆ. ಈ ಕೋಡುಗಳೊಳಗೆ ಏಳೆಂಟು ಗಣಪೆಕಾಯಿಗಳಿರುತ್ತವೆ. ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಾಡಿನಿಂದ ಈ ಗಣಪೆ ಕಾಯಿಗಳನ್ನು ಆಯ್ದು ತಂದು ಕೀಚೈನಗಳನ್ನಾಗಿಸಿದ್ದಾರೆ. ಒಂದಕ್ಕೆ 30 ರೂಪಾಯಿಯಂತೆ ಮಾರಾಟ ಮಾಡಿದರು. ಈ ಗಣಪೆಕಾಯಿಗಳನ್ನು ಮಲೆನಾಡಿಗರು ಖಾದ್ಯವಾಗಿಯೂ ಬಳಸುವುದು ಮತ್ತೊಂದು ವಿಶೇಷ.

ADVERTISEMENT

ಇದರ ಜೊತೆಗೆ ಶಿರಸಿ ತಾಲ್ಲೂಕಿನ ಬಕ್ಕಳದಲ್ಲಿ ಹೇರಳವಾಗಿ ಸಿಗುವ ರುದ್ರಾಕ್ಷಿಗಳನ್ನು ತಂದು, ಅದನ್ನು ಏಕ ರುದ್ರಾಕ್ಷಿ ದಾರ ಮಾಡಿ ಮಾರಾಟ ಮಾಡಿದರು. ನೆಲ್ಲಿಕಾಯಿ ಗಾತ್ರದ ರುದ್ರಾಕ್ಷಿಗಳೂ ಮಾರಾಟಕ್ಕಿದ್ದವು. ಒಂದು ರುದ್ರಾಕ್ಷಿಗೆ 15 ರೂಪಾಯಿ. ಜೊತೆಗೆ ವೇಸ್ಟ್‌ ಕಟ್ಟಿಗೆಯ ತುಂಡುಗಳನ್ನು ಕತ್ತರಿಸಿ ನೇಗಿಲಯೋಗಿ ಎಂಬ ಹೆಸರು ಬರೆದು ಕೀಚೈನ್ ಮಾಡಲಾಗಿದೆ. ಮರದ ಕೀಚೈನ್‌ಗಳಿಗೂ ₹15 ಎಂದು ಮಳಿಗೆಯಲ್ಲಿದ್ದ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವರ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.