ಅಪ್ಪನಿಗೆ ಆರೋಗ್ಯ ಸರಿಯಿರಲಿಲ್ಲ. ನಗರದ ಆಸ್ಪತ್ರೆಗೆ ಕರೆದುಕೊಂಡು ಹೊರಟೆ. ಬಸ್ಸು ಪೇಟೆ ತಲುಪಿದಾಗ ಬೆಳಿಗ್ಗೆ ಆರು ಗಂಟೆ. ನನಗೆ ಟೀ ಕುಡಿಯುವ ಚಟ. ಆರೋಗ್ಯ ಸರಿಯಿಲ್ಲದಿದ್ದರಿಂದ ಅಪ್ಪ ‘ನನಗೆ ಬೇಡ’ ಎಂದರು.
ಕಾಲೇಜಿನ ದಿನಗಳಲ್ಲಿ ಹೋಗುತ್ತಿದ್ದ ಟೀ ಸ್ಟಾಲ್ ಹತ್ತಿರ ಅಪ್ಪನೊಂದಿಗೆ ಹೋದೆ. ನಾನು ಟೀ ಕುಡಿಯುತ್ತ ನಿಂತಿದ್ದೆ. ಪಕ್ಕದಲ್ಲಿಯೇ ಅಪ್ಪ ನಿಂತಿದ್ದರು. ಅದೇ ಸಮಯಕ್ಕೆ ನನ್ನ ಕಾಲೇಜಿನ ಗೆಳೆಯನೊಬ್ಬ ಅಲ್ಲಿಗೆ ಬಂದ. ಅಂಗಡಿಯವನಿಂದ ಎರಡು ಸಿಗರೇಟ್ ಪಡೆದ ಅವನು, ಒಂದನ್ನ ಹಚ್ಚಿಕೊಂಡು, ಇನ್ನೊಂದನ್ನು ನನಗೆ ಕೊಡಲು ಬಂದ. ಅಪ್ಪನತ್ತ ಕೈಯಿಂದ ಸನ್ನೆ ಮಾಡುತ್ತ ‘ನಾನು ಸಿಗರೇಟ್ ಸೇದುವುದಿಲ್ಲ’ ಅಂದೆ.
ಅವನು ನನ್ನ ಸನ್ನೆಯನ್ನು ಗಮನಿಸದೆ– ‘ಕಾಲೇಜಿಗೆ ಬರುವಾಗ ಜೊತೆಗೆ ಸೇದುತ್ತಿದ್ದೆ. ಈಗೇನಾಗಿದೆ?’ ಎಂದ. ನಾನು ಮೆಲ್ಲಗೆ ‘ಅಪ್ಪ, ಅಪ್ಪ...’ ಎಂದೆ. ಅವನಿಗೆ ವಿಷಯ ಅರ್ಥವಾಯಿತು. ಕೈಯಲ್ಲಿದ್ದ ಸಿಗರೇಟ್ಗಳನ್ನು ನೆಲಕ್ಕೆ ಹಾಕಿ ಅಲ್ಲಿಂದ ಹೊರಟುಹೋದ. ಅಪ್ಪನಿಗೆ ಎಲ್ಲವೂ ಅರ್ಥವಾಗಿತ್ತು. ಮನೆಗೆ ಬಂದ ಮೇಲೆ ಅಪ್ಪ ನಡೆದ ವಿಷಯವನ್ನು ಅಮ್ಮನಿಗೆ ತಿಳಿಸಿದರು. ಇಬ್ಬರಿಂದರೂ ಬೈಸಿಕೊಂಡಿದ್ದಾಯಿತು. ಅಂದಿನಿಂದ ಸಿಗರೇಟ್ ಸೇದುವುದನ್ನು ನಿಲ್ಲಿಸಿಬಿಟ್ಟೆ.
–ಸಣ್ಣಮಾರಪ್ಪ, ಚಂಗಾವರ (ದೇವರಹಟ್ಟಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.