ಏಕೆ ಸಹಿಸಿದೆ ಸೀತೆ...?
ಬಿರುನುಡಿಯ ಅಪವಾದಕೆ
ಮರು ನುಡಿಯದೆ...
ಹೊನ್ನ ಸುಪ್ಪತ್ತಿಗೆಯ ಸರಿಸಿ
ಕಾನನದಿ ಕಲ್ಲ ಹಾದಿಯ
ಸವೆಸಿ ಬಳಲಿ ಬಸವಳಿಯಲಿಲ್ಲವೇ
ಕೇವಲ ಪತಿಯ ಪ್ರೇಮಕೆ...
ನಿನ್ನ ತ್ಯಾಗ ಪ್ರೇಮಕೆ ಯಃಕಶ್ಚಿತ
ಗೌರವ ನಿರೀಕ್ಷಣೆಯಿಲ್ಲವೇ?...
ನೀ ಎಂದೂ ತಪ್ಪಿಲ್ಲ...
ಕಾಯ ವಾಚಾ ಮನಸಾ
ಗರ್ಭ ಧರೆಯ ಮೊಳಕೆಯ...
ಸಮಯಕ್ಕೂ ನೆನಪಿಸಬಾರದೆ...?
ಧರ್ಮೇಚ ಅರ್ಥೇಚ ಕಾಮೇಚ...
ಅವನೇ ಕೊಟ್ಟ ಮಾತು.
ಯಾಕೆ ಧಿಕ್ಕರಿಸಲಿಲ್ಲ ಸೀತೆ...
ಪ್ರಜಾಪತಿಯೊಂದೆ ಅಲ್ಲ ಅವ ಸೀತಾಪತಿ
ಅಂದು ಧಿಕ್ಕರಿಸಿದ್ದರೆ...
ಇಂದು ಹೀಗಾಗುತ್ತಿರಲಿಲ್ಲ...
ನೀನೇನೊ ಅಗ್ನಿಪ್ರವೇಶಿಸಿ ಗೆದ್ದೆ!
ಉಳಿದ ಹೆಣ್ಣುಗಳು?
ಹೌದು... ನೀನು ಎಲ್ಲ ಹೆಣ್ಣುಗಳಂತಲ್ಲ, ಆದರೆ,
ಅವತಾರ ಪುರುಷ ನಿನ್ನ ಪತಿ
ಎಲ್ಲ ಗಂಡಸರಂತಾಗಿಬಿಟ್ಟನಲ್ಲ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.