-ಕಿಗ್ಗಾಲು ಎಸ್ ಗಿರೀಶ್, ಮೂರ್ನಾಡು
**
ಪಡುವಣದಂಚಲಿ ನೇಸರ ಮುಳುಗಲು
ಭೂಮಿಗೆ ಇಳಿದನು ಭಗವಂತ
ಬಣ್ಣದ ಕುಂಚದ ಪೆಟ್ಟಿಗೆ ಹಿಡಿದು
ಬನದೊಳು ನುಸುಳಿದ ಆ ಸಂತ ||1||
ಇರಿಸಿದ ಕುಂಚದ ಪೆಟ್ಟಿಗೆಯೊಳಗಡೆ
ಸಾವಿರ ಬಣ್ಣದ ಹೊಸಡಬ್ಬ
ಹಚ್ಚಲು ಪ್ರತಿ ಸುಮಲತೆಗಳಿಗೆ
ಆಯಿತು ಕಣ್ಗಳಿಗದು ಹಬ್ಬ ||2||
ಸಾವಿರ ವಿಧದ ತರುಲತೆಗಳಿಗೆ
ಹಚ್ಚಲು ತೆಗೆದನು ಆ ಕುಂಚ
ಕುಂಚವ ಪಿಡಿದು ಮೆಲ್ಲಗೆ ಬಳಿದ
ಪ್ರತಿಸುಮಗಳಿಗೂ ಅತಿಕೊಂಚ ||3||
ಬಣ್ಣದ ಡಬ್ಬಿಗೆ ಕುಂಚವನದ್ದುತ
ಪ್ರತಿ ಕುಸುಮದ ಬಳಿ ಸರಿದು
ಹೂಗಳ ಪಕಳೆಯ ಪಿಡಿಯುತ ಮೆಲ್ಲನೆ
ಹಚ್ಚಿದ ಬಣ್ಣವನವ ಸುರಿದು ||4||
ಕೆಂಪು ಗುಲಾಬಿಗೆ, ಅರಿಸಿನ ಡೇರೆಗೆ
ಬಳಿದನು ಬಣ್ಣವ ಮುದದಿಂದ
ದಾಸವಾಳದ ಶಲಾಕಾಗ್ರವೂ
ಆಯಿತು ನೋಡಲು ಬಲು ಅಂದ! ||5||
ಜಾಜಿ, ಸಂಪಿಗೆ, ಝೀನಿಯಾ ಮಲ್ಲಿಗೆ
ಎಲ್ಲವು ಪಡೆದವು ಹೊಸಬಣ್ಣ
ಹಚ್ಚುತ ಹೀಗೆಯೆ ಪ್ರತಿ ಸುಮಗಳಿಗೆ
ಆಯಿತು ಕುಂಚವು ಬಲುಸಣ್ಣ! ||5||
ಆಗಲೆ ದೂರದಿ ಚೋಮನ ಕೋಳಿಯು
ಕೂಗುತ ತಿಳಿಸಿತು ಬೆಳಗಾಯ್ತು
ಕೋಳಿಯ ಕೂಗಿಗೆ ಬೆಚ್ಚಿದ ದೇವನು
ಗಡಿಬಿಡಿಯಲಿ ಸ್ವರ್ಗಕೆ ಹೊರಟಾಯ್ತು! ||6||
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.