ADVERTISEMENT

‘ಭಾರತೀಯತೆಯ ಅನ್ವೇಷಣೆ’

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
‘ಭಾರತೀಯತೆಯ ಅನ್ವೇಷಣೆ’
‘ಭಾರತೀಯತೆಯ ಅನ್ವೇಷಣೆ’   

1983ರಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿಗೆ ಪಾತ್ರವಾದದ ಕಾದಂಬರಿ ‘ದಿ ಲಾಸ್ಟ್‌ ಲ್ಯಾಬಿರಿಂಥ್‌’. ಇದನ್ನು ಬರೆದವರು ಅರುಣ್‌ ಜೋಷಿ. ಈ ಕೃತಿಯನ್ನು ಐ.ಎ.ಎಸ್‌ ಅಧಿಕಾರಿ ಬಿ.ಆರ್. ಜಯರಾಮರಾಜೇ ಅರಸ್ ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೈಗಾರಿಕೋದ್ಯಮಿಯೂ, ಕೋಟ್ಯಧೀಶನೂ ಆದ ಸಾಮ್‌ ಭಾಸ್ಕರ್‌ನನ್ನು ಅವ್ಯಕ್ತವಾದ ಹಸಿವೊಂದು ಸೆಳೆಯುತ್ತಿರುತ್ತದೆ. ಭಾಸ್ಕರ್ ಯಾವಾಗಲೂ ‘ನನಗೆ ಬೇಕು, ನನಗೆ ಬೇಕು’ ಎಂದು ಚೀತ್ಕರಿಸುತ್ತ ಇರುತ್ತಾನೆ. ಮುಂಬಯಿಯಲ್ಲಿ ಶುರುವಾಗುವ ಈ ಉದ್ಯಮಿಯ ಶೋಧವು ಅವನನ್ನು ವಾರಾಣಸಿಗೆ ಕರೆತರುತ್ತದೆ. ಈ ಕಾದಂಬರಿಯಲ್ಲಿ ಎಲ್ಲ ಸಂಕೀರ್ಣಗಳನ್ನು ಒಳಗೊಂಡ ನಿರಂತರ ಸಮಕಾಲೀನ ವಸ್ತು ವಿಷಯವಿದೆ. ಕಥೆಯ ಆಧ್ಯಾತ್ಮಿಕ ಮತ್ತು ಐಂದ್ರಿಯಿಕ ಆಯಾಮಗಳು ಸೂಕ್ಷ್ಮವಾಗಿ ಹೆಣೆದು, ಇದು ಅಸಾಮಾನ್ಯ ಕೃತಿಯಾಗಿ ಹೊರಹೊಮ್ಮಿದೆ ಎನ್ನುವುದು ಅಕಾದೆಮಿಯು ಈ ಪುಸ್ತಕದ ಹಿಂಬದಿಯಲ್ಲಿ ನೀಡಿರುವ ವಿವರಣೆ.

‘ದಿ ಲಾಸ್ಟ್‌ ಲ್ಯಾಬಿರಿಂಥ್‌ ಕೃತಿಯಲ್ಲಿ ಜೋಷಿ ಅವರು ಭಾರತೀಯತೆಯ ಅನ್ವೇಷಣೆ ನಡೆಸಿದ್ದಾರೆ. ವಸಾಹತೋತ್ತರ ಯುಗದ ಯುವಕರು ಆಧ್ಯಾತ್ಮಿಕವಾಗಿ ಗಟ್ಟಿಗರಲ್ಲ. ಆಧ್ಯಾತ್ಮಿಕ ಬೇರುಗಳ ಮರುಶೋಧವೇ ಇದಕ್ಕೆ ಇರುವ ಏಕೈಕ ಪರಿಹಾರ. ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯ ಮನಸ್ಸಿನ ಆಳದಲ್ಲಿ ಇರುವುದರಿಂದಾಗಿ ಪಾಶ್ಚಿಮಾತ್ಯರ ಅನುಕರಣೆಯು ಎಂದಿಗೂ ಜೀವನಸುಖ ನೀಡಲು ಸಾಧ್ಯವಿಲ್ಲ ಎಂದು ಜೋಷಿ ತಮ್ಮ ಕಾದಂಬರಿಯ ಮೂಲಕ ಹೇಳುತ್ತಾರೆ’ ಎಂದು ಅಲಹಾಬಾದ್‌ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕಿ ಡಾ. ನೀತಿ ಅಗರ್ವಾಲ್‌ ಅವರು ಈ ಕೃತಿಯ ಬಗ್ಗೆ ಬರೆದಿದ್ದಾರೆ.

ADVERTISEMENT

‘ಲಾಸ್ಟ್‌ ಲ್ಯಾಬಿರಿಂಥ್ ಕಾದಂಬರಿಯು ಒಂದು ಅದ್ಭುತ ಕೃತಿ – ಇದು ಗಂಭೀರವಾದದ್ದು. ಮನಸ್ಸನ್ನು ತಟ್ಟುವಂಥದ್ದು ಹಾಗೂ ಬಿಡದೆ ಓದಿಸಿಕೊಂಡು ಹೋಗುವಂಥದ್ದು. ಯಶಸ್ವಿ ನಗರ ಭಾರತದ ಕ್ಷೋಭೆಯ ಒಳ ಪ್ರಪಂಚದೊಳಗೆ ಒಂದು ಮೋಹಕ ಶೋಧ’ ಎಂದು ಈ ಪುಸ್ತಕದ ಬಗ್ಗೆ ಸರ್ದಾರ್ ಖುಷವಂತ್ ಬರೆದಿದ್ದಾರಂತೆ. ಈ ಮಾಹಿತಿಯನ್ನು ಪುಸ್ತಕದ ಬೆನ್ನುಡಿಯಲ್ಲಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.