ADVERTISEMENT

ದೊಡ್ಡಿ ಶೇಖರ ಅವರ ಕವಿತೆ 'ಕೋಟೆಯೊಡೆದು ಬರಿದಾಗಲಿ'

ದೊಡ್ಡಿಶೇಖರ  ಪುತ್ತೂರು
Published 31 ಮೇ 2025, 23:30 IST
Last Updated 31 ಮೇ 2025, 23:30 IST
   

ಶುಗರಿದ್ದ ಮೈಯಲ್ಲಿ ಗಾಯ ಮೊಳೆಯದೆ
ನೆವ ಯಾವುದಾದರೂ ಸಾಕು
ಹಾದಿಯ ಎಡಗುಕಲ್ಲು
ಬಾಗಿಲ ಹೊಸ್ತಿಲು
ಮುರಿವ ಸೌದೆಯ ಸಿವರು
ನವೆಯ ಕರೆವ ತನ್ನುಗುರು
ಏನಾದರೂ ಗಾಯದ ಬೀಜ ಬಿತ್ತಿದಂತೆ

ಎದೆಯಲ್ಲಿ ಅವುತ ನೋವ ಮರ್ಮವ
ತಾಕುವುದಕ್ಕೆ ಏನಾದರೂ ಸಾಕು
ಮಾತಿನ ಕಾಲು ಮುರಿದು ಕುಕ್ಕರಿಸಿದರೆ
ಆಡುತ್ತಲೇ ನೆನಪ ಹಕ್ಕಳೆ ಹರಿದರೆ
ನಗುವೂ ಮುಳ್ಳ ಗೆರೆ ಎಳೆದರೆ
ಒಲ್ಲದ ಓರೆಯು ಕಣ್ಣಿಗೆ ಚುಚ್ಚಿದರೆ
ಪಸೆಯಾಡುವುದು ನೋವ ಗಾಯ
ರಸಿಕೆಯೆಂಬುದು ತುಂಬುದು ಎದೆಯ

ಎಚ್ಚರ ಸತ್ತಿದ್ದು ಒಳಗೋ ಹೊರಗೋ
ಚಚ್ಚರದರಿವು ಬೇಗುದಿ ಆರದ ಕಿಡಿ
ತಿಳಿವು ತಗ್ಗಾದ ನೆಲದ ನೀರು
ಯಾವ ಕೋಳಿಯ ಕಾಲೂ
ಕಲಕಿದರೆ ಬಗ್ಗಡದ ಮನೆ
ನೋವ ಕನ್ನಡಿ ಸಿಡಿಯುವುದು ಯಾವಾಗ
ತೂರುವ ಕೃಪಾ ಕಲ್ಲು ಎಲ್ಲಿದೆಯೋ
ನೀರಗುಳ್ಳೆಯ ಮನಸು ಒಡೆಯುವುದಾದರೂ ಯಾವಾಗ
ತಂಗಾಳಿಯ‌ ಬೆರಳೇ ಮುಟ್ಟಾಡು ಗುಳ್ಳೆ ಹೊಟ್ಟೆಯ
ತನಗೆ ತಾನೇ ಕೋಟೆಯೊಡೆದು ಬರಿದು ಬರಿದಾಗಲಿ
ದೂರಿನ ದೊರೆ ಮರಣಿಸಲಿ
ಪಟಾಕಿ ಬಾಲಕ್ಕೆ ಬೆಂಕಿಕೊಡದೆ ಕುಣಿಯದೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.