ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬುಧವಾರ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಸಲಿದೆ. ಇದರ ಆಧಾರದ ಮೇಲೆ ಈ ವಾರದ ಷೇರುಪೇಟೆ ವಹಿವಾಟಿನ ದಿಕ್ಕು ನಿರ್ಧಾರವಾಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆ ಕಂಡಿದೆ. ಹೀಗಿದ್ದರೂ ವಿತ್ತೀಯ ಕೊರತೆ ಏರಿಕೆ ಕಂಡಿರುವುದು ಹೂಡಿಕೆ ಚಟುವಟಿಕೆ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ 5.7ಕ್ಕೆ ಕುಸಿತ ಕಂಡಿತ್ತು. ಆದರೆ ಎರಡನೇ ತ್ರೈಮಾಸಿಕದಲ್ಲಿ ಶೇ 6.3ಕ್ಕೆ ಜಿಗಿತ ಕಂಡಿದೆ.
‘ದೇಶದ ಅರ್ಥ ವ್ಯವಸ್ಥೆಯ ಮೇಲೆ ಜಿಎಸ್ಟಿ ಮತ್ತು ನೋಟು ರದ್ದತಿ ಬೀರಿದ್ದ ನಕಾರಾತ್ಮಕ ಪರಿಣಾಮಗಳು ಅಂತ್ಯ ಕಾಣುತ್ತಿವೆ ಎನ್ನುವುದಕ್ಕೆ 2ನೇ ತ್ರೈಮಾಸಿಕದ ಜಿಡಿಪಿ ಪ್ರಗತಿ ಉತ್ತಮ ಉದಾಹರಣೆಯಾಗಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.
‘ಈ ವಾರ ಷೇರುಪೇಟೆಗೆ ಆರ್ಬಿಐ ಹಣಕಾಸು ನೀತಿ ಹೆಚ್ಚು ಮಹತ್ವದ್ದಾಗಿದೆ. ವಹಿವಾಟು ಯಥಾಸ್ಥಿತಿಯಲ್ಲಿಯೇ ಮುಂದುವರಿಯುವ ನಿರೀಕ್ಷೆ ಇದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯು ಹಣ ಹೂಡಿಕೆ ಚಟುವಟಿಕೆ ಮೇಲೆ ಪ್ರಭಾವ ಬೀರಲಿವೆ. ಅಲ್ಪಾವಧಿಗೆ ವಿತ್ತೀಯ ಕೊರತೆ ಹೆಚ್ಚಾಗಿರುವುದು ಮತ್ತು ಕಚ್ಚಾ ತೈಲ ಬೆಲೆ ಏರಿಕೆ ಷೇರುಪೇಟೆಯಲ್ಲಿ ಏರಿಳಿತ ಸೃಷ್ಟಿಸಲಿವೆ’ ಎಂದೂ ಹೇಳಿದ್ದಾರೆ.
ಕಳೆದ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 846 ಅಂಶ ಕುಸಿತ ಕಂಡಿತ್ತು.
**
ಗುಜರಾತ್ ಚುನಾವಣೆಯ ಫಲಿತಾಂಶದ ಬಗ್ಗೆ ಷೇರುಪೇಟೆ ಹೆಚ್ಚಿನ ಆಸಕ್ತಿ ಹೊಂದಿದೆ.
-ಜಮೀತ್ ಮೋದಿ, ಸ್ಯಾಮ್ಕೊ ಸೆಕ್ಯುರಿಟೀಸ್ನ ಸ್ಥಾಪಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.