ನವದೆಹಲಿ: ಉದ್ಯೋಗ ಸೃಷ್ಟಿಗೆ ವಿಶ್ವಾಸಾರ್ಹವಾದ ವ್ಯವಸ್ಥೆ ರೂಪಿಸುವ ಅಗತ್ಯ ಇದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಭಿಪ್ರಾಯಪಟ್ಟಿದೆ.
ಸಂಘಟಿತ ವಲಯದಲ್ಲಾದರೂ ಇಂತಹ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗಿದೆ ಎಂದು ಹೇಳಿದೆ.
ರಾಷ್ಟ್ರೀಯ ಆರ್ಥಿಕ ನೀತಿಗಳು, ಒಂದೆಡೆಯೇ ಸಿಗುವ ದತ್ತಾಂಶದ ಆಧಾರದ ಮೇಲೆ ರೂಪಿತವಾಗಬೇಕೇ ಹೊರತು, ಬಿಡಿ ಬಿಡಿಯಾಗಿ ಸಿಗುವ ಮಾಹಿತಿಗಳಿಂದ ಅಲ್ಲ. ಪ್ರತೀ ತಿಂಗಳು ಹಣದುಬ್ಬರ, ಕೈಗಾರಿಕಾ ಪ್ರಗತಿಯ ಅಂಕಿ–ಅಂಶಗಳನ್ನು ಪ್ರಕಟಿಸುವಂತೆಯೇ ವೇತನದಾರರ ಮಾಹಿತಿಯನ್ನೂ ತಿಂಗಳಿಗೊಮ್ಮೆ ಪ್ರಕಟಿಸಬೇಕು ಎಂದು ‘ಅಸೋಚಾಂ’ ಪ್ರತಿಪಾದಿಸಿದೆ.
ಆರ್ಥಿಕತೆಯ ದೊಡ್ಡ ಭಾಗವು ಸಂಘಟಿತವಾದಲ್ಲಿ ಉದ್ಯೋಗ ಸೃಷ್ಟಿಯ ಮಾಹಿತಿ ಪಡೆಯುವುದು ಕಷ್ಟವಾಗಲಾರದು. ಬ್ಯಾಂಕ್ ಖಾತೆಯ ಮೂಲಕವೇ ವೇತನ ನೀಡುತ್ತಿರುವುದರಿಂದ ಆ ಮಾಹಿತಿ ಪಡೆದು ಉದ್ಯೋಗ ಸೃಷ್ಟಿಯ ಮಾಹಿತಿಯೊಂದಿಗೆ ಹೋಲಿಕೆ ಮಾಡಲು ಸುಲಭವಾಗುತ್ತದೆ. ಆಗ ಹೊಸದಾಗಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ಸ್ಪಷ್ಟ ಚಿತ್ರಣ ದೊರೆಯುತ್ತದೆ. ಇದರಿಂದ ನಮ್ಮ ಉದ್ಯೋಗದ ದತ್ತಾಂಶ ಮಾಹಿತಿಯಲ್ಲಿ ಸುಧಾರಣೆಯೂ ಸಾಧ್ಯವಾಗಲಿದೆ.
ಯಾವುದೇ ಒಂದು ಪ್ರಬುದ್ಧ ಆರ್ಥಿಕತೆಗೆ ವೇತನದಾರರ ಮಾಹಿತಿ ಬಹಳ ಮುಖ್ಯ. ಬಡ್ಡಿದರ, ಯೋಗಕ್ಷೇಮ, ಹೂಡಿಕೆ ಮತ್ತು ತೆರಿಗೆಗೆ ಸಂಬಂಧಿಸಿದಂತೆ ನೀತಿ ರೂಪಿಸಲು ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.