ಮಂಗಳೂರು: ಮಂಗಳೂರಿನ ಕೇಂದ್ರೀಯ ಅಬಕಾರಿ ಕಮಿಷನರೇಟ್ 2010-11ರಲ್ಲಿ ರೂ. 4960 ಕೋಟಿ ಸಂಗ್ರಹಿಸುವ ಮೂಲಕ ತೆರಿಗೆ ವಸೂಲಿಯಲ್ಲಿ ದೇಶದಲ್ಲಿ 9ನೇ ಸ್ಥಾನಕ್ಕೇರಿದೆ.
ಕಳೆದ ಹಣಕಾಸು ವರ್ಷ ಕೇಂದ್ರೀಯ ಅಬಕಾರಿ ತೆರಿಗೆ ರೂಪದಲ್ಲಿ ರೂ. 1.60 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದೇ ಇಲಾಖೆಯಿಂದ ಈಗ 119 ಸೇವೆಗಳಿಗೆ ಸೇವಾ ತೆರಿಗೆ ವಿಧಿಸಲಾಗುತ್ತಿದ್ದು, 2011-12ರಲ್ಲಿ ರೂ. 80 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ಕಮಿಷನರ್ ಎಂ.ವಿ.ಎಸ್.ಚೌಧರಿ ಶುಕ್ರವಾರ ನಡೆಯಲಿರುವ ಇಲಾಖೆಯ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2010-11ರಲ್ಲಿ ಮಂಗಳೂರು ಕಮಿಷನರೇಟ್ನಲ್ಲಿ ಸೇವಾ ತೆರಿಗೆ ರೂಪದಲ್ಲಿ ರೂ. 260 ಕೋಟಿ ಸಂಗ್ರಹವಾಗಿದೆ. ಅಬಕಾರಿ ತೆರಿಗೆ ವಂಚಕರನ್ನು ಪತ್ತೆ ಹಚ್ಚುವುದಕ್ಕಾಗಿ ರಚಿಸಲಾದ ತಂಡ ಈವರೆಗೆ 5 ಪ್ರಕರಣ ಪತ್ತೆ ಹಚ್ಚಿ ರೂ. 1.50 ಕೋಟಿ ತೆರಿಗೆ ವಂಚಿಸಿರುವುದನ್ನು ಬೆಳಕಿಗೆ ತಂದಿದೆ. ನಿಗದಿತ ಪ್ರಮಾಣದಲ್ಲಿ ಅಬಕಾರಿ ತೆರಿಗೆ ಪಾವತಿಸದ, ಆಮದು ಸೇವೆಗಳಿಗೆ ಸಮರ್ಪಕ ತೆರಿಗೆ ನೀಡದ ಪ್ರಕರಣಗಳನ್ನೂ ಪತ್ತೆಹಚ್ಚಲಾಗಿದೆ ಎಂದಿದ್ದಾರೆ.
1944ರ ಫೆ. 24ರಂದು ಕೇಂದ್ರೀಯ ಅಬಕಾರಿ ಕಾಯ್ದೆ ಜಾರಿಗೆ ಬಂದಿತ್ತು. ಆರಂಭದಲ್ಲಿ 10 ಉತ್ಪನ್ನಗಳ ಮೇಲೆ ಮಾತ್ರ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಮೊದಲ ವರ್ಷ ಅಬಕಾರಿ ತೆರಿಗೆ ರೂಪದಲ್ಲಿ ರೂ. 50 ಕೋಟಿ ಸಂಗ್ರಹವಾಗಿತ್ತು. ಸದ್ಯಕ್ಕೆ ಮದ್ಯ ಹೊರತುಪಡಿಸಿ (ಇದು ರಾಜ್ಯ ಅಬಕಾರಿಗೆ ಒಳಪಡುತ್ತದೆ) ಎಲ್ಲಾ ಉತ್ಪಾದನಾ ಸಾಮಗ್ರಿಗಳ ಮೇಲೂ ಕೇಂದ್ರೀಯ ಅಬಕಾರಿ ತೆರಿಗೆ ವಿಧಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.