ನವದೆಹಲಿ(ಪಿಟಿಐ): ಕಳೆದ ಕೆಲವು ತಿಂಗಳಿಂದ ಪೆಟ್ರೋಲ್ ಬೆಲೆ ಏರಿಕೆಯನ್ನಷ್ಟೇ ಕಾಣುತ್ತಿದ್ದ ವಾಹನಗಳ ಮಾಲೀಕರು, ಶೀಘ್ರದಲ್ಲಿಯೇ ಡೀಸೆಲ್ ಬೆಲೆ ಏರಿಕೆ ಬಿಸಿಯನ್ನೂ ಅನುಭವಿಸಬೇಕಿದೆ. ಜತೆಗೆ ಸಬ್ಸಿಡಿ ನೆರವಿನ ಅಡುಗೆ ಅನಿಲ ಸಿಲಿಂಡರ್ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ ನಾಲ್ಕಕ್ಕೆ ಮಿತಿಗೊಳ್ಳುವ ಸಾಧ್ಯತೆ ಹೆಚ್ಚಿದೆ.
`ಡೀಸೆಲ್ ಬೆಲೆ ಹೆಚ್ಚಿಸಿರಿ ಹಾಗೂ ಸಬ್ಸಿಡಿ ನೆರವಿನ ಅಡುಗೆ ಅನಿಲ ಸಿಲಿಂಡರ್ ವಿತರಣೆ ಪ್ರಮಾಣ ಕಡಿಮೆ ಮಾಡಿರಿ~ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಶಿಫಾರಸು ಮಾಡಿದೆ.
2012-13ನೆ ಸಾಲಿನ ದೇಶದ `ಆರ್ಥಿಕ ಮುನ್ನೋಟ~ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದ `ಪಿಎಂಇಎಸಿ~ ಅಧ್ಯಕ್ಷ ಸಿ.ರಂಗರಾಜನ್, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿ ಶೇ 6.7ರಷ್ಟು ಉತ್ತಮ ಮಟ್ಟದಲ್ಲಿರಲಿದೆ. ಆದರೆ, ದೇಶದಲ್ಲಿನ ವಿತ್ತೀಯ ಕೊರತೆಗೆ ಪರಿಹಾರ ಕಂಡುಕೊಳ್ಳಬೇಕಿದ್ದರೆ ಸಬ್ಸಿಡಿ ಕಡಿತ ಅನಿವಾರ್ಯ.
ಡೀಸೆಲ್ ಬೆಲೆ ಏರಿಕೆ ವಿಚಾರದಲ್ಲಿ ಸರ್ಕಾರ ಒಂದೆರಡು ಹೆಜ್ಜೆ ಮುಂದೆ ಹೋಗಿ ಚಿಂತಿಸಬೇಕಿದೆ. ಈ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ~ ಎಂದಿದ್ದಾರೆ.2010ರಲ್ಲಿಯೇ ಪೆಟ್ರೋಲ್ ಬೆಲೆ ನಿಯಂತ್ರಣ ಮುಕ್ತಗೊಳಿಸಿದ ಸರ್ಕಾರ, ವಿವಿಧ ಕ್ಷೇತ್ರಗಳಿಂದ ವಿರೋಧ ವ್ಯಕ್ತವಾಗಿದ್ದರಿಂದ ಡೀಸೆಲ್ ಬೆಲೆ ಮೇಲಿನ ನಿಯಂತ್ರಣ ಮುಂದುವರಿಸಿದೆ.
ಸಿಲಿಂಡರ್ ಮಿತಿ: ಬಡ ಕುಟುಂಬಗಳಲ್ಲಿ ವರ್ಷಕ್ಕೆ ನಾಲ್ಕು ಅಡುಗೆ ಅನಿಲ ಸಿಲಿಂಡರ್ಗಳಷ್ಟೇ ಬಳಕೆಯಾಗುತ್ತಿವೆ. ಹಾಗಾಗಿ ಸಬ್ಸಿಡಿ ನೆರವಿನ ಸಿಲಿಂಡರ್ ಪೂರೈಕೆಯನ್ನು ಇನ್ನು ಮುಂದೆ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ ನಾಲ್ಕಕ್ಕೇ ಸೀಮಿತಗೊಳಿಸಬೇಕು ಎಂಬ ಶಿಫಾರಸನ್ನೂ ಸಮಿತಿ ಮಾಡಿದೆ.
ಪ್ರತಿ ಲೀಟರ್ ಡೀಸೆಲ್ ವಾಸ್ತವಕ್ಕಿಂತ ರೂ 12.13ನಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಗೃಹ ಬಳಕೆ ಸಿಲಿಂಡರ್ ಸಹ ರೂ 231 ಸಬ್ಸಿಡಿ ನೆರವಿನಲ್ಲಿ ವಿತರಣೆಯಾಗುತ್ತಿದೆ. ಒಂದೊಮ್ಮೆ ಡೀಸೆಲ್ ಬೆಲೆಯನ್ನು ಲೀಟರ್ಗೆ ರೂ 1ರಷ್ಟು ಹೆಚ್ಚಿಸಿದರೂ ಸಬ್ಸಿಡಿ ಮೊತ್ತದಲ್ಲಿ ವಾರ್ಷಿಕ ರೂ 7800ರಷ್ಟು ಉಳಿತಾಯ ಮಾಡಿಕೊಡುತ್ತದೆ.
ದೇಶದ ಶೇ 29 ಕುಟುಂಬಗಳು ಅಡುಗೆಗಾಗಿ ವರ್ಷಕ್ಕೆ ಕೇವಲ ನಾಲ್ಕು ಸಿಲಿಂಡರನ್ನಷ್ಟೇ ಬಳಸುತ್ತಿವೆ. ಈ ಮಿತಿಯಲ್ಲಿಯೇ ಪ್ರತಿ ಕುಟುಂಬಕ್ಕೂ ಸಿಲಿಂಡರ್ ವಿತರಿಸಿದರೆ ಒಂದು ವರ್ಷಕ್ಕೆ ಸಬ್ಸಿಡಿ ಮೊತ್ತದಲ್ಲಿಯೇ ಏನಿಲ್ಲವೆಂದರೂ ರೂ 18,000 ಕೋಟಿಯಷ್ಟು ಉಳಿತಾಯವಾಗುತ್ತದೆ ಎಂದು ವರದಿ ಒತ್ತಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.