ADVERTISEMENT

ತೈಲ ಸಬ್ಸಿಡಿ ಇನ್ನಷ್ಟು ಕಡಿತ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ನವದೆಹಲಿ(ಪಿಟಿಐ): ಪೆಟ್ರೋಲಿಯಂ ಉತ್ಪನ್ನಗಳಿಗೆ ನೀಡುತ್ತಿರುವ ಸಬ್ಸಿಡಿ ದೇಶದ ವಿತ್ತೀಯ ವ್ಯವಸ್ಥೆಗೆ ದೊಡ್ಡ ಹೊರೆಯಾಗಿದೆ ಎಂದಿರುವ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಬಹಳ ಅಸಮರ್ಪಕವಾಗಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ತುರ್ತಾಗಿ ಪರಿಷ್ಕರಿಸಬೇಕಿದೆ ಎಂದಿದ್ದಾರೆ. ಆ ಮೂಲಕ ಪೆಟ್ರೋಲಿಯಂ ಉತ್ಪನ್ನಗಳಿಗೆ ಮತ್ತಷ್ಟು ಸಬ್ಸಿಡಿ ಕಡಿತದ ಸುಳಿವು ನೀಡಿದ್ದಾರೆ.

ಇಲ್ಲಿ `ಪೆಟ್ರೋ ಟೆಕ್-2012~ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಡೀಸೆಲ್, ಸೀಮೆಎಣ್ಣೆ, ಅಡುಗೆ ಅನಿಲ ಸಿಲಿಂಡರ್‌ಗೆ ಸಬ್ಸಿಡಿ ಸರಾಗವಾಗಿ ಸಂದಾಯವಾಗುತ್ತಿದೆ. ದೀರ್ಘ ಕಾಲ ಇದನ್ನೇ ಮುಂದುವರಿಸಲಾಗದು. ಈಗಲಾದರೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ವ್ಯತ್ಯಯ ಸರಿಪಡಿಸಲು ಮಾರ್ಗ ಕಂಡುಕೊಳ್ಳಬೇಕಿದೆ. ಹೆಚ್ಚು ಸಬ್ಸಿಡಿ ಪಡೆದುಕೊಳ್ಳುತ್ತಿರುವ ಡೀಸೆಲ್ ಮತ್ತು ಸೀಮೆಎಣ್ಣೆ ದರದಲ್ಲಿ ಬದಲಾವಣೆ ತರಲೇಬೇಕಿದೆ ಎಂದರು.

ದೇಶಕ್ಕೆ ಅಗತ್ಯವಿರುವ ಕಚ್ಚಾತೈಲದಲ್ಲಿ ಶೇ 75ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಆಮದು-ರಫ್ತು ನಡುವಿನ ಅಂತರ ಹೆಚ್ಚುತ್ತಿದೆ. ಸಬ್ಸಿಡಿ ಹೊರೆಯೂ ವಿತ್ತೀಯ ಕೊರತೆ ಹೆಚ್ಚಳಕ್ಕೆ ಕಾರಣವಾಗಿದೆ. ಇಂಥ ಸಮಸ್ಯೆ ಭಾರತವನ್ನಷ್ಟೇ ಅಲ್ಲ, ಪ್ರಗತಿ ಹಾದಿಯಲ್ಲಿರುವ ಹಲವು ದೇಶಗಳನ್ನು ಕಾಡುತ್ತಿದೆ. ಹಾಗಾಗಿ ಆ ದೇಶಗಳೂ ಸಬ್ಸಿಡಿ ನೀತಿ ಬದಲಾವಣೆಗೆ ಚಿಂತನೆ ನಡೆಸಬೇಕಿದೆ~ ಎಂದು ಹೇಳಿದರು. ವಿವಿಧ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಒತ್ತಡ, ಬೆಲೆ ಏರಿಕೆ, ಅಗತ್ಯ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇರುವುದು ಮೊದಲಾದ ಅಂಶಗಳು ದೇಶದ ಆರ್ಥಿಕ ಪ್ರಗತಿಯ ವೇಗ ನಿದಾನಗೊಳಿಸಿವೆ. ಇದೆಲ್ಲವೂ ಜನರ ಹಿತಕ್ಕೆ ಮಾರಕವಾಗಿದೆ. ಆಡಳಿತ ವ್ಯವಸ್ಥೆ, ನೀತಿ ನಿರೂಪಣೆಗೂ ಸವಾಲೆನಿಸಿದೆ  ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.