ADVERTISEMENT

ಪಡಿತರ ಸೋರಿಕೆ ತಡೆಗೆ `ಜಿಪಿಎಸ್' ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:52 IST
Last Updated 5 ಡಿಸೆಂಬರ್ 2012, 19:52 IST

ನವದೆಹಲಿ (ಪಿಟಿಐ): ಪಡಿತರ ಧಾನ್ಯಗಳನ್ನು ಸಾಗಿಸುವ ವಾಹನಗಳಲ್ಲಿ `ಜಿಪಿಎಸ್' ತಂತ್ರಜ್ಞಾನ ಅಳವಡಿಸಲು ರಾಜ್ಯಗಳಿಗೆ ಅಗತ್ಯ ಹಣಕಾಸಿನ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.ತಮಿಳುನಾಡು ಮತ್ತು ಚತ್ತೀಸ್‌ಗಡದಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬಂದಿದೆ. ಈ ಮೂಲಕ ಪಡಿತರ ಧಾನ್ಯಗಳನ್ನು ಸಾಗಿಸುವ ಟ್ರಕ್‌ಗಳ ಮೇಲೆ ಸದಾ ನಿಗಾ ವಹಿಸಬಹುದು ಮತ್ತು ದಾರಿ ಮಧ್ಯೆ ಆಗುತ್ತಿದ್ದ ಸೋರಿಕೆ ಮತ್ತು ಮಾರ್ಗ ಬದಲಾವಣೆ ತಪ್ಪಿಸಬಹುದಾಗಿದೆ. ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಉಳಿದ ರಾಜ್ಯಗಳಿಳೂ ಈ ತಂತ್ರಜ್ಞಾನ ವಿಸ್ತರಿಸುವ ಕುರಿತು ಕೇಂದ್ರ ಚಿಂತಿಸುತ್ತಿದೆ.

ಉಪಗ್ರಹ ಆಧಾರಿತ ಈ ನಿಗಾ ವ್ಯವಸ್ಥೆಯನ್ನು 11ನೇ ಪಂಚವಾರ್ಷಿಕ ಯೋಜನೆಯಲ್ಲಿ (2007-12) ಜಾರಿಗೊಳಿಸಲಾಗಿದ್ದು, ಸದ್ಯ ಎರಡು ರಾಜ್ಯಗಳಲ್ಲಿ ಮಾತ್ರ ಜಾರಿಯಲ್ಲಿದೆ. ಎರಡೂ ರಾಜ್ಯಗಳು ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿವೆ ಎಂದು ಆಹಾರ ಸಚಿವ ಕೆ.ವಿ ಥಾಮಸ್ ಲೋಕಸಭೆಗೆ ತಿಳಿಸಿದ್ದಾರೆ.

`ಜಿಪಿಎಸ್' ತಂತ್ರಜ್ಞಾನ ಅಳವಡಿಸಿದ ನಂತರ ಪಡಿತರ ಧಾನ್ಯ ಪೂರೈಕೆದಾರರಲ್ಲಿ ನೈತಿಕ ಭಯ ಮೂಡಿದೆ. ವಾಹನದ ಪ್ರತಿ ಕದಲಿಕೆಯ ಮೇಲೆ `ಜಿಪಿಎಸ್' ಮೂಲಕ ನಿಗಾ ವಹಿಸಬಹುದು. ಆಹಾರ ಧಾನ್ಯ ಸಾಗಾಣಿಕೆಯಲ್ಲಿ ಆಗುತ್ತಿದ್ದ ವಿಳಂಬ ಮತ್ತು ಅಕ್ರಮ ತಪ್ಪಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಸರ್ಕಾರ ಪ್ರತಿ ತಿಂಗಳು ಸಬ್ಸಿಡಿ ದರದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) 6.52 ಕೋಟಿ ಕುಟುಂಬಗಳಿಗೆ 35 ಕೆ.ಜಿ ಆಹಾರ ಧಾನ್ಯ ಪೂರೈಸುತ್ತಿದೆ. ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) 11.5 ಕೋಟಿ ಕುಟುಂಬಗಳು ಮಾಸಿಕ 15 ಕೆ.ಜಿ ಪಡಿತರ ಧಾನ್ಯ ಪಡೆಯುತ್ತಿವೆ.

`ಷೇರುಪೇಟೆಗೆ ಭಯೋತ್ಪಾದಕರ ಹಣ-ಮಾಹಿತಿ ಇಲ್ಲ'

ನವದೆಹಲಿ (ಪಿಟಿಐ): ಷೇರುಪೇಟೆಗೆ ಭಯೋತ್ಪಾದಕ ಸಂಘಟನೆ ಮೂಲಗಳಿಂದ ಹಣ ಹರಿದುಬರುತ್ತಿದೆ ಎನ್ನುವುದಕ್ಕೆ ಯಾವುದೇ ಅಧಿಕೃತ ಪುರಾವೆಗಳು ಲಭಿಸಿಲ್ಲ ಎಂದು ಸರ್ಕಾರ ಹೇಳಿದೆ.ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗುಪ್ತಚರ ಇಲಾಖೆ ಸಮಗ್ರ ತನಿಖೆ ನಡೆಸುತ್ತಿದೆ. ಆದರೆ, ಭಯೋತ್ಪಾದಕ ಸಂಘಟನೆಗಳ ಮೂಲದಿಂದ ಷೇರುಪೇಟೆಗೆ ಬಂಡವಾಳ ಹರಿಯುತ್ತಿದೆ ಎನ್ನುವುದನ್ನು ದೃಢೀಕರಿಸಬಲ್ಲ ಮಾಹಿತಿ ಸದ್ಯ ಸರ್ಕಾರದ ಬಳಿ ಇಲ್ಲ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಆರ್.ಪಿ.ಎನ್ ಸಿಂಗ್ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.