ಬೆಂಗಳೂರು: ಬ್ಯಾಂಕಿಂಗ್ ಸೇವೆಗಳಲ್ಲಿ ಪಾರದರ್ಶಕತೆ ತರಲು ಮತ್ತು ಸೇವಾ ಲೋಪಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತೀಯ ಬ್ಯಾಂಕಿಂಗ್ ನೀತಿ ಸಂಹಿತೆ ಮತ್ತು ಗುಣಮಟ್ಟ ಮಂಡಳಿಯು (ಬಿಸಿಎಸ್ಬಿಐ) ನಿಯಮಗಳನ್ನು ಪರಿಷ್ಕೃತಗೊಳಿಸಿದೆ ಎಂದು `ಬಿಸಿಎಸ್ಬಿಐ~ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣನ್ ರಾಜಾ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಸಿಎಸ್ಬಿಐ~ 2006ರಲ್ಲಿ ಜಾರಿಗೊಳಿಸಿದ್ದ `ಗ್ರಾಹಕರೆಡೆಗಿನ ಬ್ಯಾಂಕುಗಳ ಬದ್ಧತೆ~ ನೀತಿಸಂಹಿತೆಯನ್ನು 2009ರಲ್ಲಿ ಪರಿಷ್ಕೃತಗೊಳಿಸಲಾಗಿದೆ. `ಅತಿ ಸಣ್ಣ ಮತ್ತು ಸಣ್ಣ ಪ್ರಮಾಣ ಉದ್ಯಮಗಳ ನೀತಿ (ಎಂಎಸ್ಇ) -2008~ ಸದ್ಯ ನವೀಕರಣದ ಹಂತದಲ್ಲಿದೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಭಾರತೀಯ ಬ್ಯಾಂಕುಗಳ ಒಕ್ಕೂಟದ (ಐಬಿಎ) ಸಹಭಾಗಿತ್ವದಲ್ಲಿ `ಬಿಸಿಎಸ್ಬಿಐ~ಅಸ್ತಿತ್ವಕ್ಕೆ ಬಂದಿದ್ದು, ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆಗಳು ತಲುಪುವಂತೆ ನೋಡಿಕೊಳ್ಳುತ್ತಿದೆ. ಸೇವಾ ಲೋಪಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಿ, ಬ್ಯಾಂಕುಗಳಿಗೆ ಅಗತ್ಯ ಸಲಹೆ ಸೂಚನೆ ನೀಡುತ್ತಿದೆ. `ಬಿಸಿಎಸ್ಬಿಐ~ ತಂಡ ಬ್ಯಾಂಕ್ ಶಾಖೆಗಳಿಗೆ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಬ್ಯಾಂಕುಗಳು ಸ್ವಯಂಪ್ರೇರಿತವಾಗಿ `ಬಿಸಿಎಸ್ಬಿಐ~ ಸದಸ್ಯತ್ವ ಪಡೆಯಬಹುದು, ಇದು ಕಡ್ಡಾಯವಲ್ಲ. `ಸದ್ಯ 113 ಬ್ಯಾಂಕುಗಳು ಸದಸ್ಯತ್ವ ಹೊಂದಿದ್ದು, ನೀತಿ ಸಂಹಿತೆಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು. `ಎಂಎಸ್ಇ~ ನೀತಿ ಸಂಹಿತೆಗೆ ಸಂಬಂಧಿಸಿದಂತೆ ವಿಚಾರ ಸಂಕಿರಣವನ್ನೂ ಹಮ್ಮಿಕೊಳ್ಳಲಾಗಿತ್ತು.
ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ಬೆಂಗಳೂರು ಪ್ರಾದೇಶಿಕ ಕಚೇರಿಯ ಚೀಫ್ ಜನರಲ್ ಮ್ಯಾನೇಜರ್ ಅಶ್ವಿನಿ ಮೆಹ್ರಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.