ADVERTISEMENT

ಮಾರುಕಟ್ಟೆ ಮಾಯೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2011, 19:30 IST
Last Updated 15 ನವೆಂಬರ್ 2011, 19:30 IST
ಮಾರುಕಟ್ಟೆ ಮಾಯೆ
ಮಾರುಕಟ್ಟೆ ಮಾಯೆ   

ಉದ್ಯಮ ಸಂಘರ್ಷ ಇಳಿಕೆ
ಈ ಬಾರಿಯ ಜುಲೈ-ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಉದ್ಯಮ ವಲಯದಲ್ಲಿ ಕಾರ್ಮಿಕ ಸಂಘರ್ಷಗಳ ಪ್ರಮಾಣ ತಗ್ಗಿದೆ. ಉದ್ಯೋಗ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ನೆಲೆಸಿರುವುದೇ ಇದಕ್ಕೆ ಕಾರಣ.
 
ಮೇಲಧಿಕಾರಿ ಜತೆಗೆ ಜಗಳ ತೆಗೆದು ಕೆಲಸ ಬಿಟ್ಟು ಹೋದರೆ ಬೇರೆಡೆ ಕೆಲಸ ಸಿಗುತ್ತದೆ ಎಂಬ ಖಾತರಿ ಇಲ್ಲವಾದ ಕಾರಣ ಹಲವರು ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಂಡು ಕೆಲಸ ಮುಂದುವರಿಸಿದ್ದಾರೆ ಎಂದು ಮೈಹೈರಿಂಗ್‌ಡಾಟ್‌ಕಾಂ ಸಂಸ್ಥೆ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

ಕಳೆ ಮೇ-ಜೂನ್ ನಡುವೆ 11,800 ಉದ್ಯೋಗಿಗಳು ಮತ್ತು 249 ಉದ್ಯೋಗದಾತರನ್ನು ಸಮೀಕ್ಷೆಗೆ ಒಳಪಡಿಸಿ ಈ ಸಂಗತಿ ಕಂಡುಕೊಳ್ಳಲಾಗಿದೆ. 

ಸೇವಾ ಕ್ಷೇತ್ರಗಳಲ್ಲಿನ ಪ್ರತಿಭಾವಂತ ಯುವ ಉದ್ಯೋಗಿಗಳು ಮೇಲಧಿಕಾರಿಗಳ ಜತೆಗೆ ಭಿನ್ನಾಭಿಪ್ರಾಯ ಹೊಂದಿ ಕೆಲಸ ಬಿಟ್ಟು ಬೇರೆಡೆಗೆ ಕೆಲಸಕ್ಕೆ ಸೇರಿಕೊಳ್ಳುವುದು ಹೆಚ್ಚಾಗಿ ಕಂಡುಬಂದಿದೆ.

ಸಿರಿವಂತ ಕೌಟುಂಬಿಕ ಕಂಪೆನಿಗಳು
ಷೇರು ಮಾರುಕಟ್ಟೆಯಲ್ಲಿ ದಾಖಲಾದ ಭಾರತದಲ್ಲಿರುವ ಪ್ರತಿ ಮೂರು ಕಂಪೆನಿಗಳಲ್ಲಿ ಎರಡು ಕಂಪೆನಿಗಳು ಕುಟುಂಬಗಳ ನಿಯಂತ್ರಣದಲ್ಲಿ ಇರುವ ಕಂಪೆನಿಯಾಗಿರುತ್ತವೆ. ಈ ಮೂಲಕ ಏಷ್ಯಾದ  10 ರಾಷ್ಟ್ರಗಳ ಪೈಕಿ  ಭಾರತದಲ್ಲೇ ಇಂತಹ ಉದ್ಯಮದಲ್ಲಿ  ಕೌಟುಂಬಿಕ ನಿಯಂತ್ರಣ ವ್ಯವಸ್ಥೆ ಹೆಚ್ಚಿಗೆ ಇದೆ ಎಂದು ಜಾಗತಿಕ ಹಣಕಾಸು ಸೇವಾ ಸಂಸ್ಥೆ `ಕ್ರೆಡಿಟ್ ಸ್ಯೂಸೇ~ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

ಭಾರತದ ಲಿಸ್ಟೆಡ್ ಕಂಪೆನಿಗಳಲ್ಲಿ ಶೇ 67ರಷ್ಟು ಕಂಪೆನಿಗಳು ನಿರ್ದಿಷ್ಟ ಕುಟುಂಬಗಳ ನಿಯಂತ್ರಣದಲ್ಲಿವೆ. ಚೀನಾದಲ್ಲಿ ಈ ಪ್ರಮಾಣ ಅತ್ಯಂತ ಕಡಿಮೆ (ಶೇ 13ರಷ್ಟು) ಇದೆ. ಕೌಟುಂಬಿಕ ನಿಯಂತ್ರಣ ಇರುವ ಕಂಪೆನಿಗಳೇ ಹೂಡಿಕೆದಾರರಿಗೆ ಹೆಚ್ಚಿನ ವರಮಾನ ತಂದುಕೊಡುತ್ತಿವೆ ಹಾಗೂ ಸಂಪತ್ತು ಮತ್ತು ಉದ್ಯೋಗ ಸೃಷ್ಟಿಗೆ ದಾರಿಮಾಡಿಕೊಡುತ್ತಿವೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.