ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ಮುಂದುವರಿದಿದೆ. ಹೂಡಿಕೆಗೆ ಉತ್ತಮ ಗಳಿಕೆ ಬರುತ್ತಿರುವುದರಿಂದ ಹೊಸ ಆಶಾವಾದ ಮೂಡಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) ವಾರದ ವಹಿವಾಟಿನಲ್ಲಿ 565 ಅಂಶ ಏರಿಕೆ ದಾಖಲಿಸಿ 34,192ಕ್ಕೆ ತಲುಪಿದೆ. ಹಿಂದಿನ ಎರಡು ವಾರಗಳ ವಹಿವಾಟು ಅವಧಿಯಲ್ಲಿ 1,030 ಅಂಶಗಳಷ್ಟು ಏರಿಕೆ ದಾಖಲಿಸಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 149 ಅಂಶ ಹೆಚ್ಚಾಗಿ 10,480 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.
ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ, ಚೀನಾ ದೇಶವು ತನ್ನ ಆರ್ಥಿಕತೆಯನ್ನು ಇನ್ನಷ್ಟು ಮುಕ್ತಗೊಳಿಸುವುದಾಗಿ ಹೇಳಿದೆ. ಜತೆಗೆ ಆಮದು ಸುಂಕವನ್ನೂ ತಗ್ಗಿಸುವುದಾಗಿ ತಿಳಿಸಿದೆ. ಇದರಿಂದಾಗಿ ಅಮೆರಿಕ ಮತ್ತು ಚೀನಾ ಮಧ್ಯೆ ಆರಂಭವಾಗಬಹುದಾಗಿದ್ದ ವಾಣಿಜ್ಯ ಸಮರಕ್ಕೆ ಸದ್ಯದ ಮಟ್ಟಿಗಂತೂ ಅಂತ್ಯ ಹಾಡಿದಂತಾಗಿದೆ. ಇದು ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆಯುವಂತೆ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.
ಆರ್ಥಿಕ ಪ್ರಗತಿಗೆ ಪೂರಕವಾದ ಅಂಶಗಳು ಸಹ ಹೂಡಿಕೆ ಚಟುವಟಿಕೆಯನ್ನು ಹೆಚ್ಚುವಂತೆ ಮಾಡಿವೆ. ಚಿಲ್ಲರೆ ಹಣುದಬ್ಬರ ಇಳಿಕೆ ಕಾಣುತ್ತಿದ್ದು, ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಏರಿಕೆ ಉತ್ತಮ ವಹಿವಾಟಿಗೆ ಕಾರಣವಾಗಿವೆ.
ಚಿನ್ನ, ಬೆಳ್ಳಿ ಚೇತರಿಕೆ: ವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗು ತ್ತಿದೆ. ಇದರ ಜತೆಗೆ ‘ಅಕ್ಷಯ ತೃತೀಯ’ ಕ್ಕಾಗಿ ಸಂಗ್ರಹಕಾರರು ಮತ್ತು ಚಿಲ್ಲರೆ ವರ್ತಕರು ಖರೀದಿ ಹೆಚ್ಚಿಸಿದ್ದರಿಂದ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.