ADVERTISEMENT

‘ಆರ್‌ಬಿಎಸ್‌’ ಸಮರ್ಪಕ ಜಾರಿ ಮುಖ್ಯ

ಬ್ಯಾಂಕ್‌ಗಳಿಗೆ ಚಕ್ರವರ್ತಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST
ಕೆ.ಸಿ.ಚಕ್ರವರ್ತಿ
ಕೆ.ಸಿ.ಚಕ್ರವರ್ತಿ   

ಬೆಂಗಳೂರು: ಯಾವುದೇ ಬ್ಯಾಂಕ್‌ ಹೆಚ್ಚು ವರಮಾನ ಮತ್ತು ಲಾಭ ಗಳಿಸುತ್ತಿದೆ ಎಂದರೆ ಅದು ಇನ್ನೊಂದು ಮಗ್ಗಲಲ್ಲಿ ಅಷ್ಟೇ ಕಂಟಕವನ್ನು ಎದುರಿಸುತ್ತಿದೆ ಎಂದೇ ಅರ್ಥ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಡೆಪ್ಯುಟಿ ಗವರ್ನರ್‌ ಕೆ.ಸಿ.ಚಕ್ರವರ್ತಿ ಗಮನ ಸೆಳೆದರು.

‘ಬೆಂಗಳೂರು ಬ್ಯಾಂಕರ್ಸ್‌ ಕ್ಲಬ್‌’ ನಗರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಿಸ್ಕ್‌ ಬೇಸ್ಡ್ ಸೂಪರ್‌ವಿಷನ್‌’(ಕಂಟಕ ಆಧರಿಸಿದ ಮೇಲುಸ್ತುವಾರಿ) ವಿಚಾರವಾಗಿ ಮಾತನಾಡಿದ ಅವರು, ಕಂಟಕಗಳತ್ತ ಗಮನ ಹರಿಸದೇ ಇದ್ದಾಗಲೇ ಹೆಚ್ಚಿನ ವರಮಾನ, ಲಾಭ ಗಳಿಕೆ ಸಾಧ್ಯ ಎಂದು ವಿಶ್ಲೇಷಿಸಿದರು.

ಬಹುತೇಕ ಬ್ಯಾಂಕ್‌ಗಳ ದೊಡ್ಡ ಸಮಸ್ಯೆ ಏನೆಂದರೆ ‘ಕಂಟಕ’ ಅಂದರೆ ವಾಸ್ತವವಾಗಿ ಏನು ಎಂಬುದನ್ನೇ ಅರ್ಥಮಾಡಿಕೊಳ್ಳದೇ ಇರುವುದು ಎಂದ ಚಕ್ರವರ್ತಿ, ಎಲ್ಲ ಬ್ಯಾಂಕ್‌ಗಳಲ್ಲಿ ‘ರಿಸ್ಕ್‌ ಬೇಸ್ಡ್ ಸೂಪರ್‌ವಿಷನ್‌’(ಆರ್‌ಬಿಎಸ್‌) ವ್ಯವಸ್ಥೆ ಇದ್ದರೂ ಬಹುತೇಕ ಕಡೆ ಅದರ ಸರಿಯಾದ ಬಳಕೆಯೇ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕಂಡು ಬರುವ ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡದೇ ಇರುವುದು. ದತ್ತಾಂಶ ಕೇಂದ್ರದಲ್ಲಿ ಅಪಾರ ಪ್ರಮಾಣದಲ್ಲಿ ಮಾಹಿತಿಗಳು ಸಂಗ್ರಹವಾಗಿದ್ದರೂ ಅದನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಾಗಲೀ, ಸೂಕ್ತ ರೀತಿ ಬಳಸಿಕೊಳ್ಳುವುದಾಗಲೀ ನಡೆಯುತ್ತಿಲ್ಲ. ಬ್ಯಾಂಕ್‌ಗಳ ನಡುವೆ ಹಾಗೂ ಶಾಖೆಗಳ ನಡುವೆ ಮಾಹಿತಿ ವಿನಿಮಯ ಎಂಬುದು ದೂರದ ಮಾತಾಗಿದೆ. ಹಾಗಾಗಿಯೇ ಒಂದು ಬ್ಯಾಂಕ್‌ಗೆ ವಂಚಿಸಿದ ವ್ಯಕ್ತಿ ಇನ್ನೊಂದು ಬ್ಯಾಂಕ್‌ನಿಂದಲೂ ಸಾಲ ಪಡೆದುಕೊಂಡು ವಂಚನೆ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗುತ್ತಿದೆ ಎಂದು ವಿಷಾದಿಸಿದರು.

ಸಾಲ ಕೊಡುವ ವಿಚಾರದಲ್ಲಿಯೂ ಬ್ಯಾಂಕ್‌ಗಳ ನಡುವೆ ಪೈಪೋಟಿಯೇ ನಡೆಯುತ್ತಿದೆ. ಇದಂತೂ ಕಂಟಕವನ್ನು ದೊಡ್ಡ ಪ್ರಮಾಣದಲ್ಲಿ ಮೈಮೇಲೆ ಎಳೆದುಕೊಳ್ಳುವಂತಹ ಚಟುವಟಿಕೆ. ಇದೇ ಪ್ರದೇಶದಲ್ಲಿನ ಒಂದು ದೊಡ್ಡ ಕಂಪೆನಿ ಹತ್ತಾರು ಬ್ಯಾಂಕ್‌ಗಳಿಂದ ಭಾರಿ ಮೊತ್ತದ ಸಾಲ ಪಡೆದುಕೊಂಡು ಬ್ಯಾಂಕ್‌ಗಳ ‘ವಸೂಲಿ ಆಗದ ಸಾಲ’ (ಎನ್‌ಪಿಎ) ಪ್ರಮಾಣ ನಿಯಂತ್ರಣಕ್ಕೆ ಸಿಗದಂತೆ ಮೇಲೆರಲು ಕಾರಣವಾಗಿರು ವುದೇ ಇದಕ್ಕೆ ಉದಾಹರಣೆ ಎಂದು ಸೂಚ್ಯವಾಗಿ ಹೇಳಿದರು.

ಬ್ಯಾಂಕ್‌ಗಳು ಆರೋಗ್ಯಕಾರಿಯಾಗಿ ಇರಬೇಕೆಂದರೆ ‘ಆರ್‌ಬಿಎಸ್‌’ ಅಳವ ಡಿಕೆ ಮತ್ತು ಜಾರಿಯನ್ನು ಕ್ರಮಬದ್ಧ ಗೊಳಿಸಬೇಕು. ಆಂತರಿಕವಾಗಿಯೂ ‘ಆರ್‌ಬಿಎಸ್‌’ ಆಧರಿಸಿದ ಲೆಕ್ಕಪತ್ರ ಪರಿಶೀಲನೆ ಕ್ರಮ ಪಾಲಿಸಬೇಕು. ಮಾಹಿತಿಯ ಸಮರ್ಪಕ ಬಳಕೆ ಮತ್ತು ವಿನಿಮಯ ರೂಢಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

‘ಆರ್‌ಬಿಐ’ ಪ್ರಾದೇಶಿಕ ನಿರ್ದೇಶಕಿ ಉಮಾ ಶಂಕರ್‌ ಅವರು ಉಪಸ್ಥಿತಿರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.