ADVERTISEMENT

1 ಲಕ್ಷ ಎಕರೆ ಭೂಸ್ವಾಧೀನಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST
1 ಲಕ್ಷ ಎಕರೆ ಭೂಸ್ವಾಧೀನಕ್ಕೆ ನಿರ್ಧಾರ
1 ಲಕ್ಷ ಎಕರೆ ಭೂಸ್ವಾಧೀನಕ್ಕೆ ನಿರ್ಧಾರ   

ಬೆಂಗಳೂರು: ಮುಂದಿನ ವರ್ಷ (2012 ಜೂನ್) ಮತ್ತೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ತಿಳಿಸಿದರು.ಅಮೆರಿಕ-ಇಂಡಿಯಾ ವಾಣಿಜ್ಯ ಮಂಡಳಿಯ
ನಿಯೋಗವು ಮಂಗಳವಾರ ಇಲ್ಲಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

ಭೂ ಬ್ಯಾಂಕ್ ಯೋಜನೆಯಡಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.ಮೊದಲು ಒಂದು ಲಕ್ಷ ಎಕರೆ ಭೂಮಿ  ಗುರುತಿಸಿ, ನಂತರ ಬೇಡಿಕೆಗೆ ತಕ್ಕಂತೆ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದರು. ಸರ್ಕಾರಿ ಜಾಗ, ಒಣ ಭೂಮಿಗೆ ಮೊದಲ ಆದ್ಯತೆ ನೀಡಲಾಗುವುದು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಮಿ ಪಡೆಯಲಾಗುವುದು. ಅವರ ಮಕ್ಕಳಿಗೆ ಐಟಿಐ, ಸರ್ಕಾರಿ ಕೈಗಾರಿಕಾ ಉಪಕರಣಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡುವುದರ ಜೊತೆಗೆ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ನೀಡಲಾಗುವುದು ಎಂಬುದಾಗಿ ತಿಳಿಸಿದರು.ಇದುವರೆಗೆ 80 ಸಾವಿರ ಎಕರೆ ಭೂಮಿ ಸ್ವಾಧೀನವಾಗಿದೆ.ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿಯಲ್ಲಿ ಪೊಸ್ಕೊ ಕಂಪೆನಿಗೆ ಮೂರು ಸಾವಿರ ಎಕರೆ ಭೂಮಿ ನೀಡಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಮೂರು ಸಾವಿರ ಎಕರೆ ಸ್ವಾಧೀನಪಡಿಸಿಕೊಂಡಿದ್ದು, ಕೋಕಾ ಕೊಲಾ ಕಂಪೆನಿಗೆ 250 ಎಕರೆ ನೀಡಲಾಗುತ್ತದೆ. ಕಲ್ಯಾಣ್ ಗ್ರೂಪ್ ಸಂಸ್ಥೆ ಸಾವಿರ ಮೆಗಾವಾಟ್ ವಿದ್ಯುತ್ ಯೋಜನೆ ಆರಂಭಿಸಲಿದ್ದು, ಇದಕ್ಕೆ 750 ಎಕರೆ ನೀಡಲಾಗುವುದು. ಇದಲ್ಲದೆ ಪಾರ್ಮಾಸಿಟಿಕಲ್ ಪಾರ್ಕ್ ಸಹ ಸ್ಥಾಪನೆಯಾಗಲಿದೆ ಎಂದರು.

ವೈಮಾಂತರಿಕ್ಷ ವಿಶ್ವವಿದ್ಯಾಲಯ: ಮೂರು ಖಾಸಗಿ ಸಂಸ್ಥೆಗಳು ವೈಮಾಂತರಿಕ್ಷ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದೆ ಬಂದಿವೆ. ಆದರೆ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರ ಇನ್ನೂ ಕಾಯ್ದೆ ರೂಪಿಸಿಲ್ಲವಾದ್ದರಿಂದ ತಡವಾಗಬಹುದು. ಸಾರ್ವಜನಿಕ ವಲಯದ ಸಂಸ್ಥೆಗಳು ಮುಂದೆ ಬಂದರೆ ಬೇಗ ಆರಂಭಿಸಬಹುದು. ವಿಶ್ವವಿದ್ಯಾಲಯ ಸ್ಥಾಪನೆಗೆ ಜಾಗದ ಸಮಸ್ಯೆ ಇಲ್ಲ. ದೊಡ್ಡಬಳ್ಳಾಪುರ ಬಳಿ ಭೂಮಿ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.