ADVERTISEMENT

10 ಗೋದಾಮುಗಳ ನಿರ್ಮಾಣಕ್ಕೆ ನಬಾರ್ಡ್ ನೆರವು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2011, 19:30 IST
Last Updated 4 ನವೆಂಬರ್ 2011, 19:30 IST
10 ಗೋದಾಮುಗಳ ನಿರ್ಮಾಣಕ್ಕೆ ನಬಾರ್ಡ್ ನೆರವು
10 ಗೋದಾಮುಗಳ ನಿರ್ಮಾಣಕ್ಕೆ ನಬಾರ್ಡ್ ನೆರವು   

ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ನೆರವಿನಿಂದ ರಾಜ್ಯ ಉಗ್ರಾಣ ನಿಗಮ ಹತ್ತು ಜಿಲ್ಲೆಗಳಲ್ಲಿ ಒಟ್ಟು 1.31 ಲಕ್ಷ ಟನ್ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸಲಿದೆ.

ಈ ಯೋಜನೆಯ ಒಟ್ಟು ವೆಚ್ಚ ರೂ 60.17 ಕೋಟಿ  ಆಗಲಿದ್ದು, ರೂ 42.12 ಕೋಟಿಗಳನ್ನು `ನಬಾರ್ಡ್~ ಸಾಲದ ರೂಪದಲ್ಲಿ ನಿಗಮಕ್ಕೆ ಮಂಜೂರು ಮಾಡಿದೆ. ಸಾಲದ ಮೊದಲನೆಯ ಕಂತು ರೂ 11 ಕೋಟಿ ಮೊತ್ತವನ್ನು `ನಬಾರ್ಡ್~ ಪ್ರಧಾನ ಪ್ರಬಂಧಕ ಎಸ್.ಎನ್.ಎ. ಜಿನ್ನಾ ಅವರು ನಿಗಮದ ಅಧ್ಯಕ್ಷ, ಶಾಸಕ ಎಂ. ನಾರಾಯಣ ಸ್ವಾಮಿ ಅವರಿಗೆ ಶುಕ್ರವಾರ ಇಲ್ಲಿ ಹಸ್ತಾಂತರಿಸಿದರು. ಉಳಿದ ರೂ 18.05 ಕೋಟಿಗಳನ್ನು ನಿಗಮವೇ ಭರಿಸಲಿದೆ.

ಬಾಗಲಕೋಟೆ, ಬೆಳಗಾವಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಗೋದಾಮುಗಳು ನಿರ್ಮಾಣವಾಗಲಿವೆ. ಚಿತ್ರದುರ್ಗ, ಮೈಸೂರು, ಹರಿಹರ, ಚಿಕ್ಕಮಗಳೂರು ಮತ್ತು ರಾಯಚೂರಿನಲ್ಲಿ ಎರಡನೆಯ ಹಂತದಲ್ಲಿ ಗೋದಾಮುಗಳು ನಿರ್ಮಾಣವಾಗಲಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಮೂರನೆಯ ಹಂತದಲ್ಲಿ ಗೋದಾಮು ತಲೆ ಎತ್ತಲಿದೆ. ನಬಾರ್ಡ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಅಡಿ ಹಣಕಾಸಿನ ನೆರವು ಉಗ್ರಾಣ ನಿಗಮಕ್ಕೆ ದೊರೆತಿರುವುದು ರಾಷ್ಟ್ರದಲ್ಲೇ ಮೊದಲು ಎಂದು ಜಿನ್ನಾ ಹೇಳಿದರು. ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ಉಮೇಶ್ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.