ನವದೆಹಲಿ(ಪಿಟಿಐ): ಕಳೆದ ವರ್ಷ ದೇಶ ದೊಳಕ್ಕೆ ಬಂಗಾರದ ಕಳ್ಳಸಾಗಣೆಯಲ್ಲಿ ಭಾರಿ ಹೆಚ್ಚಳವಾಗಿದೆ. 2013ರಲ್ಲಿ ಕಳ್ಳ ಸಾಗಣೆಯ ಹಲವು ಪ್ರಕರಣಗಳನ್ನು ಪತ್ತೆಹಚ್ಚಿ, ಒಟ್ಟು ರೂ.271 ಕೋಟಿ ಬೆಲೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಅಧಿಕೃತ ಮಾಹಿತಿಯನ್ನು ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಜೆ.ಡಿ.ಶೀಲಂ ಅವರು ರಾಜ್ಯಸಭೆಗೆ ಮಂಗಳವಾರ ನೀಡಿದರು.
ಚಾಲ್ತಿ ಖಾತೆ ಕೊರತೆ (ಸಿಎಡಿ) ಏರಿಕೆ ಯಾಗುತ್ತಿದ್ದುದನ್ನು ತಡೆಯುವ ಸಲು ವಾಗಿ ಚಿನ್ನದ ಆಮದು ತಗ್ಗಿಸಲು ಸರ್ಕಾರ ಮುಂದಾಯಿತು. ಚಿನ್ನದ ಆಮದು ಮೇಲಿನ ಅಬಕಾರಿ ಸುಂಕವನ್ನು ಶೇ 10ರವರೆಗೂ ಹೆಚ್ಚಿಸಿತು. ಇದರಿಂದ ಚಿನ್ನದ ಆಮದು ತಗ್ಗಿತು. ಆದರೆ, ಕಳ್ಳ ಮಾರ್ಗದಲ್ಲಿ ಚಿನ್ನ ದೇಶದೊಳಕ್ಕೆ ಪ್ರವೇಶಿಸುವುದೂ ಹೆಚ್ಚಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಾಗೆಂದು, ವಿದೇಶದಿಂದ ಚಿನ್ನ ತರು ವುದಕ್ಕೆ ಸಂಪೂರ್ಣ ನಿಷೇಧವನ್ನೇನೂ ಹೇರಲಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ಮಾರ್ಗಸೂಚಿ ಗಳನ್ನು ಅನುಸರಿಸಿ ಬಂಗಾರವನ್ನು ಈಗಲೂ ವಿದೇಶದಿಂದ ತರಬಹುದಾ ಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಚಿನ್ನದ ಕಳ್ಳಸಾಗಣೆ ಹಿಂದೆಯೂ ಇತ್ತು. ಆದರೆ, ಅಲ್ಪ ಪ್ರಮಾಣದಲ್ಲಿತ್ತು.
2011ರಲ್ಲಿ ಕಳ್ಳಮಾರ್ಗದಲ್ಲಿ ಬಂದ ರೂ.15.41 ಕೋಟಿ ಬೆಲೆಯ ಬಂಗಾರ ವಶಪಡಿಸಿಕೊಳ್ಳಲಾಗಿತ್ತು. 2012ರಲ್ಲಿ ರೂ.22 ಕೋಟಿ ಮೌಲ್ಯ ಕಳ್ಳಚಿನ್ನ ಸ್ವಾಧೀನ ವಾಗಿತ್ತು. ಆದರೆ, 2013ರಲ್ಲಿ ಚಿನ್ನದ ಕಳ್ಳಸಾಗಣೆ ವಿಪರೀತ ಎನ್ನುವಷ್ಟು ಹೆಚ್ಚಿತು. ಒಂದೇ ವರ್ಷದಲ್ಲಿ ರೂ.271.15 ಕೋಟಿ ಬೆಲೆಯ ಚಿನ್ನ ವಶ ಪಡಿಸಿಕೊಳ್ಳಲಾಗಿದೆ. ಸೆರೆ ಸಿಕ್ಕವರ ವಿರುದ್ಧ ಕಸ್ಟಮ್ಸ್ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತಿದೆ ಎಂದು ಸಚಿವರು ಸದನಕ್ಕೆ ವಿವರಿಸಿದರು.
ವಿದೇಶದಿಂದ ಆಗಮಿಸುವವರನ್ನು ಗಮನಿಸಿ ಪರಿಶೀಲಿಸುತ್ತಿರುವ ಕಸ್ಟಮ್ಸ್ ಅಧಿಕಾರಿಗಳು, ಸುಂಕ ಪಾವತಿಸದೆಯೋ, ಕಳ್ಳ ಮಾರ್ಗದಲ್ಲೋ ಚಿನ್ನ ತರುವವ ರನ್ನು ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಸ್ವಾಧೀನ ವಾದ ಚಿನ್ನವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ವಿವರ ಸದನಕ್ಕೆ ಸಚಿವರು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.