ADVERTISEMENT

‘ಕಚ್ಚಾ ರೇಷ್ಮೆ ಉತ್ಪಾದನೆ ಹೆಚ್ಚಳ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
‘ಕಚ್ಚಾ ರೇಷ್ಮೆ ಉತ್ಪಾದನೆ ಹೆಚ್ಚಳ’
‘ಕಚ್ಚಾ ರೇಷ್ಮೆ ಉತ್ಪಾದನೆ ಹೆಚ್ಚಳ’   

ಬೆಂಗಳೂರು: ರಾಜ್ಯದಲ್ಲಿ ಕಚ್ಚಾ ರೇಷ್ಮೆ ಉತ್ಪಾದನೆ 7,063 ಟನ್‌ನಿಂದ 9,571 ಹೆಕ್ಟೇರ್‌ ಪ್ರದೇಶಕ್ಕೆ ವಿಸ್ತರಿಸಿದ್ದು, ಶೇ 23ರಷ್ಟು ಹೆಚ್ಚಳವಾಗಿದೆ ಎಂದು ಪಶು ಸಂಗೋಪನೆ ಸಚಿವ ಎ. ಮಂಜು ತಿಳಿಸಿದರು.

ದ್ವಿತಳಿ ಕಚ್ಚಾ ರೇಷ್ಮೆ ಉತ್ಪಾದನೆ 572 ಟನ್‌ನಿಂದ 1,488 ಟನ್‌ಗೆ ಹೆಚ್ಚಳವಾಗಿದ್ದು, ಇದು ಸಾರ್ವಕಾಲಿಕ ದಾಖಲೆ (ಶೇ 160) ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

2–3 ವರ್ಷಗಳಿಂದ ಬರಗಾಲ ಇದ್ದರೂ ತಾಂತ್ರಿಕತೆ ಅಳವಡಿಕೆಯಿಂದ ಉತ್ಪಾದಕತೆಯಲ್ಲಿ ಹೆಚ್ಚಳವಾಗಿದೆ. ಗೂಡಿನ ಗುಣಮಟ್ಟದಲ್ಲೂ ಸುಧಾರಣೆಯಾಗಿದ್ದು, ಧಾರಣೆಗಳು ಉತ್ತಮವಾಗಿವೆ ಎಂದರು.

ADVERTISEMENT

ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 18,430 ರೇಷ್ಮೆ ಹುಳು ಸಾಕಾಣಿಕೆ ಮನೆಗಳ ನಿರ್ಮಾಣಕ್ಕೆ ₹ 151.95 ಕೋಟಿ ಒದಗಿಸಲಾಗಿದೆ. 15,337 ಹೆಕ್ಟೇರ್‌ ಪ್ರದೇಶದ ಹಿಪ್ಪು ನೇರಳೆ ತೋಟಕ್ಕೆ ಹನಿ ನೀರಾವರಿ ಅಳವಡಿಸಲು ₹ 122.87 ಕೋಟಿ ಸಹಾಯಧನ ನೀಡಲಾಗಿದೆ ಎಂದರು. ರೇಷ್ಮೆ ಗೂಡು ವಹಿವಾಟಿನಲ್ಲಿ ಪಾರದರ್ಶಕತೆ ತರಲು ಕೊಳ್ಳೇಗಾಲ, ರಾಮನಗರ, ಶಿಡ್ಲಘಟ್ಟ, ಕನಕಪುರ, ಕೋಲಾರ, ಚನ್ನಪಟ್ಟಣ ಮತ್ತು ವಿಜಯಪುರ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿ ಇ– ಹರಾಜು ವ್ಯವಸ್ಥೆ ಜಾರಿಗೆ ತರಲಾಗಿದೆ. ಇತರ ಕಡೆಗಳಲ್ಲೂ ಈ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡದಲ್ಲಿ ಕಕೂನ್‌ ಬ್ಯಾಂಕ್‌ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.