ನವದೆಹಲಿ: ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಕೆಲವು ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ.
ನೋಟು ರದ್ದತಿಯ ನಂತರ ನಗದು ರಹಿತ ವಹಿವಾಟಿನತ್ತ ಜನರು ನಿರೀಕ್ಷಿತ ಮಟ್ಟದಲ್ಲಿ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ತೆರಿಗೆ ವಿನಾಯಿತಿಗೆ ಮೊರೆ ಹೋಗಲು ಕೇಂದ್ರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಇದರೊಂದಿಗೆ ಪಿಒಎಸ್ ಯಂತ್ರ (ಸ್ವೈಪಿಂಗ್ ಮಷಿನ್) ಖರೀದಿಸುವ ಸಣ್ಣ ಮತ್ತು ಚಿಲ್ಲರೆ ವರ್ತಕರಿಗೆ ಫೆ.1ರಂದು ಮಂಡಿಸಲಿರುವ 2018ರ ಬಜೆಟ್ನಲ್ಲಿ ಕೆಲ ವಿನಾಯಿತಿ ಘೋಷಿಸುವ ನಿರೀಕ್ಷೆ ಇದೆ.
ಗ್ರಾಮೀಣ ಪ್ರದೇಶದ ವರ್ತಕರಿಗೆ ಈ ಯಂತ್ರಗಳನ್ನು ಉಚಿತವಾಗಿ ಇಲ್ಲವೇ ಅಗ್ಗದ ದರದಲ್ಲಿ ನೀಡಲು ಕೇಂದ್ರ ಚಿಂತನೆ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಮಹಾನಗರಗಳನ್ನು ಹೊರತುಪಡಿಸಿದರೆ ನಗದುರಹಿತ ವಹಿವಾಟು ಇನ್ನೂ ಸಣ್ಣ ನಗರ, ಪಟ್ಟಣ ಮತ್ತು ಗ್ರಾಮಗಳನ್ನು ತಲುಪಿಲ್ಲ. ಇಂದಿಗೂ ಜನರು ನಗದು ವಹಿವಾಟಿಗೆ ಆದ್ಯತೆ ನೀಡುತ್ತಿದ್ದಾರೆ. ಸಣ್ಣ,ಪುಟ್ಟ ವರ್ತಕರ ಬಳಿ ಪಿಒಎಸ್ ಯಂತ್ರ ಇಲ್ಲದಿರುವುದು ನಗದುರಹಿತ ವಹಿವಾಟಿಗೆ ಅಡಚಣೆಯಾಗಿದೆ. ಇದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.